ದೊಡ್ಡಬಳ್ಳಾಪುರ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಜಾಗೃತ ಪರಿಷತ್ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿಶಾತ್ ಸುಲ್ತಾನ ಇಸ್ರೊ-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕುರಿತು ಮಾತನಾಡಿದರು. ಇಸ್ರೊ ಸಂಸ್ಥೆ ತನ್ನ ನಿರಂತರ ಸಂಶೋಧನೆ ಹಾಗೂ ಸಾಧನೆಯಿಂದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. ಮೊಬೈಲ್ ಹಾಗೂ ಕಂಪ್ಯೂಟರ್ ಸೇರಿದಂತೆ ವಿದ್ಯುನ್ಮಾನ ಸಲಕರಣೆಗಳು ಉಪಗ್ರಹ ಆಧಾರಿತವಾಗಿವೆ. ಇದರಲ್ಲಿ ಇಸ್ರೊ ಕೊಡುಗೆ ಅಪಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಆರ್.ಮಹಾದೇವ್ ಮಾತನಾಡಿ, ಪಠ್ಯದಾಚೆಗಿನ ವಿಷಯ ಅರಿಯಲು ಉಪನ್ಯಾಸ ಸಹಕಾರಿಯಾಗಿದೆ ಎಂದರು.
ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಟಿ.ಎನ್.ಪ್ರಭುದೇವ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳ ಮಹಾದೇವ್, ಕಾರ್ಯಾಧ್ಯಕ್ಷ ತರಿದಾಶ್ ಶ್ರೀನಿವಾಸ್, ಗೌರವ ಕಾರ್ಯದರ್ಶಿ ವಿ.ಸಿ.ಜ್ಯೋತಿಕುಮಾರ್, ಕವಿ ವೆಂಕಟೇಶ್ ಇದ್ದರು.