ದೊಡ್ಡಬಳ್ಳಾಪುರ:ತಾಲ್ಲೂಕಿನಲ್ಲಿ ಜನತಾ ಜಲಧಾರೆ ಜಾಥಾಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಧಾರೆ ರಥ ಸಂಚರಿಸುವ ಮೂಲಕ ನೀರಾವರಿ ಯೋಜನೆ ಕುರಿತಂತೆ ಜನರಿಗೆ ಮಾಹಿತಿ ನೀಡಲಾಗಿದೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಲಕ್ಷ್ಮಿಪತಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸಮಪರ್ಕವಾಗಿ ಜಾರಿಯಾಗಬೇಕಾದರೆ ಜೆಡಿಎಸ್ ಆಡಳಿತದಿಂದ ಮಾತ್ರ ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ಜನತಾ ಜಲಧಾರೆ ರಥ ಯಾತ್ರೆ ನಡೆಸಲಾಗಿದೆ. ಇದರ ಸಮಾರೋಪ ಸಮಾರಂಭ ಮೇ 13ರಂದು ನೆಲಮಂಗಲ-ಕುಣಿಗಲ್ ರಸ್ತೆ ಬಳಿ ನಡೆಯಲಿದೆ. ಸಮಾರಂಭದಲ್ಲಿ ತಾಲ್ಲೂಕಿನಿಂದ ಕಾರ್ಯಕರ್ತರು ಭಾಗವಹಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ವಿ. ಆಂಜನೇಗೌಡ ಮಾತನಾಡಿ, ತಾಲ್ಲೂಕಿನ ಕನಸವಾಡಿಯಲ್ಲಿ ಜನತಾ ಜಲಧಾರೆ ರಥಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದ್ದರು. ನಮ್ಮ ತಾಲ್ಲೂಕಿನಲ್ಲಿ ರಥ ಯಾತ್ರೆ ಯಶಸ್ವಿಯಾಗಿ ನಡೆಯುವ ಮೂಲಕ ಪ್ರತಿ ಗ್ರಾಮವನ್ನು ತಲುಪಿದೆ ಎಂದು ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಮುನೇಗೌಡ, ನಗರ ಘಟಕದ ಅಧ್ಯಕ್ಷ ವಿ.ಎಸ್. ರವಿಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಲಕ್ಷ್ಮಿನಾರಾಯಣ್, ಮುಖಂಡರಾದ ರಂಗಸ್ವಾಮಿ, ಸತೀಶ್, ಮಂಜುನಾಥ್ ಹಾಜರಿದ್ದರು.