ದೊಡ್ಡಬಳ್ಳಾಪುರ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಗಳಾಗುತ್ತಿದ್ದು, ಜಾಗತಿಕ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿ ಪ್ರತಿಭೆಗಳನ್ನು ತಯಾರು ಮಾಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಅಶ್ವತ್ಥಯ್ಯ ಹೇಳಿದರು.
ನಗರದ ಕೊಂಗಾಡಿಯಪ್ಪ ಶಿಕ್ಷಕರ ತರಬೇತಿ ಮಹಾವಿದ್ಯಾಲಯದಲ್ಲಿ ಅಂತಿಮ ಬಿ.ಇಡಿ ವಿದ್ಯಾರ್ಥಿಗಳಿಗಾಗಿ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಬಿಇಡಿ ಪದವಿ ಪಡೆಯುವ ಪ್ರಶಿಕ್ಷಣಾರ್ಥಿಗಳು ಹಲವು ಶಾಲಾ-ಕಾಲೇಜುಗಳಲ್ಲಿ ಬೋಧಕ ವೃತ್ತಿಯನ್ನು ಹೊಂದುವ ಕನಸು ಹೊಂದಿರುತ್ತಾರೆ. ಕೆಲವೊಮ್ಮೆ ಅವರ ಪ್ರತಿಭೆಗೆ ಪೂರಕವಾದ ಅವಕಾಶಗಳು ದೊರೆಯುವುದಿಲ್ಲ. ಹೀಗಾಗಿ ಸ್ಥಳೀಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲ ಅನೇಕ ಖಾಸಗಿ ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿ, ಅರ್ಹ ಪ್ರಶಿಕ್ಷಣಾರ್ಥಿಗಳನ್ನು ಉದ್ಯೋಗಕ್ಕೆ ಪರಿಗಣಿಸುವಂತೆ ಕೋರಲಾಗಿತ್ತು. ಇದಕ್ಕೆ ಪೂರಕವಾಗಿ ಹಲವು ವಿದ್ಯಾ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದರು.
70 ಅರ್ಹ ಶಿಬಿರಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು. 18 ಶಾಲೆಗಳು ಹಾಗೂ 3 ಕಾಲೇಜುಗಳು ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಖಜಾಂಚಿ ಡಿ.ಪ್ರಭುದೇವಯ್ಯ, ನಿರ್ದೇಶಕರಾದ ವಿ.ತಿಮ್ಮಶೆಟ್ಟಪ್ಪ, ಕೆ.ಎಂ.ಕೃಷ್ಣಮೂರ್ತಿ, ಪಿ.ವಿ.ಶ್ರೀನಿವಾಸಮೂರ್ತಿ, ಎಸ್.ರಾಜಲಕ್ಷ್ಮಿ, ಲಲಿತಮ್ಮ, ಜಗದೀಶ್ಬಾಬು, ಜೆ.ಬಿ.ಮಹೇಶ್, ಪ್ರಾಂಶುಪಾಲ ಬಿ.ಕೆ.ಮಂಜುನಾಥ್ ಇದ್ದರು.