ಮದ್ದೂರು: ಪಟ್ಟಣದ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಕಚೇರಿ ಆವರಣದಲ್ಲಿದ್ದ ಮರಗಳನ್ನು ನಿಯಮ ಮೀರಿ ಕಡಿದು ಹಾಕಲಾಗಿದೆ ಎಂದು ಆರೋಪಿಸಿ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು.
ಮರಗಳನ್ನು ಕಡಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅವರು ಘೋಷಣೆಗಳನ್ನು ಕೂಗಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ.ಉಮಾಶಂಕರ್ ಅವರು, ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಭಾನುವಾರದ ರಜಾದಿನ ಬೇವಿನ ಮರ, ಹೊಂಗೆ ಮರ ಹಾಗೂ ಇತರೆ ಮರಗಳನ್ನು ಕಡಿಯಲಾಗಿದೆ ಎಂದರು.
ಕಡಿದಿರುವ ಮರಗಳನ್ನು ಅರಣ್ಯ ಇಲಾಖೆಯು ತನ್ನ ವಶಕ್ಕೆ ಪಡೆಯಬೇಕು. ನಿಯಮಾನುಸಾರ ಬಹಿರಂಗ ಹರಾಜು ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ತೆಂಗು ಬೆಳೆಗಾರರ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಚನ್ನಸಂದ್ರ, ವೇದಿಕೆಯ ತಾಲ್ಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಮಹಿಳಾ ಅಧ್ಯಕ್ಷೆ ಪ್ರಿಯಾಂಕ ಅಪ್ಪುಗೌಡ, ತಮ್ಮಣ್ಣ ನಾಯಕ್, ನಿವೃತ್ತ ಯೋಧ ಕುಮಾರ್ ಭಾಗವಹಿಸಿದ್ದರು.