ದೇವನಹಳ್ಳಿ: ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಅ.30 ರಂದು ‘ಕೌಶಲ ಮೇಳ’ ನಡೆಸಲಾಗುವುದು ಎಂದುಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಇಲ್ಲಿನ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜತೆಗೆ ಕೇಂದ್ರ ಸರ್ಕಾರದ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಸಹಭಾಗಿತ್ವದಲ್ಲಿ ಮೇಳ ನಡೆಸಲಾಗುತ್ತದೆ ಎಂದರು.
ಗ್ರಾಮೀಣ ಬಡ ನಿರುದ್ಯೋಗಿ ಯುವ ಜನತೆ ವಿವಿಧ ಕೌಶಲಗಳನ್ನು ಹೊಂದಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಉದ್ಯೋಗ ಭದ್ರತೆ ಪಡೆಯುವ ಸಲುವಾಗಿ ಕೇಂದ್ರ ಸರ್ಕಾರ ಅನುಷ್ಠಾನ ಮಾಡುತ್ತಿರುವ ಮಹಾತ್ವಕಾಂಕ್ಷಿ ಯೋಜನೆ ಇದಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಬಹು ಆಯ್ಕೆ ಮಾಡಿಕೊಳ್ಳವ ಅವಕಾಶ 18 ರಿಂದ 35 ವಯೋಮಾನದ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಿದೆ. ಸ್ಪೋಕನ್ ಇಂಗ್ಲಿಷ್, ಬೇಸಿಕ್ ಕಂಪ್ಯೂಟರ್ ಕಲಿಕೆಗೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿದೆ. 10 ರಿಂದ 25 ಸಾವಿರದವರೆಗೆ ವೇತನ ಪಡೆಯುವ ಉತ್ತಮ ಅವಕಾಶವಿದೆ. ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯ ದಾಖಲಾತಿಗಳು, ಆಧಾರ್ ಕಾರ್ಡ್, ಭಾವಚಿತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ದಾಖಲೆಯೊಂದಿಗೆ ಹಾಜರಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ಎಂ.ಮೂರ್ತಿ, ಉಪಾಧ್ಯಕ್ಷೆ ಆಶಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಸ್ವಾಮಿ, ಸದಸ್ಯರಾದ ನರಸಿಂಹಮೂರ್ತಿ, ರವೀಂದ್ರ, ಶಶಿಕುಮಾರ್, ಬೇಕರಿ ಮಂಜುನಾಥ್, ಶಾರದಮ್ಮ, ಕುರುಬರ ಸಂಘ ಅಧ್ಯಕ್ಷ ರವಿಕುಮಾರ್, ಮುಖಂಡ ಸಾಯಿ ಕುಮಾರ್ ಬಾಬು ಇದ್ದರು.