ಹೊಸಕೋಟೆ: ‘ಶಾಲೆಗಳು ಸುಸಜ್ಜಿತವಾಗಿದ್ದರೆ ಅಲ್ಲಿ ವಿದ್ಯಾಭ್ಯಾಸ ಮಾಡಿ ಹೊರಬರುವ ವಿದ್ಯಾರ್ಥಿಗಳು ಸುಭದ್ರ ದೇಶವನ್ನು ಕಟ್ಟುತ್ತಾರೆ’ ಎಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದ ಶ್ರೀರಂಗನಾಥ ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಂಗನಾಥ ಶಾಲೆಯು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದೆ. ಇದರಿಂದ ಶಾಲೆಗೆ ಕಾಂಪೌಂಡ್ ಅವಶ್ಯಕತೆ ಇದೆ. ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಶಾಲೆಯ ಸುತ್ತ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಕರ್ತವ್ಯ ಎಂದರು.
ಕಲ್ಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ವಿಎಸ್ಎಸ್ಎನ್ ನಿರ್ದೇಶಕ ಪುಟ್ಟರಾಜು, ಮುಖಂಡರಾದ ಬೋಧನ ಹೊಸಹಳ್ಳಿ ಪ್ರಕಾಶ್, ದೇವರಾಜ್, ಬಾಬುರೆಡ್ಡಿ ಹಾಜರಿದ್ದರು.
ರಂಗನಾಥ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಬುಧವಾರದಿಂದ ಮಾರ್ಚ್ 21ರ ವರೆಗೆ ನಡೆಯಲಿದೆ.
ಮೊದಲ ದಿನದಂದು ಶಾಸಕ ಶರತ್ ಬಚ್ಚೇಗೌಡ ದೇವಾಲಯಕ್ಕೆ ಭೇಟಿ ನೀಡಿ ಪ್ರಥಮ ದಿನದ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ದೇವಾಲಯದ ರಥ ಮಂಟಪ ಶಿಥಿಲಗೊಂಡು ಕುಸಿಯುವ ಹಂತಕ್ಕೆ ತಲುಪಿತ್ತು. ಶಾಸಕರು ತಮ್ಮ ಸ್ವಂತ ಹಣದಲ್ಲಿ ನೂತನ ರಥ ಮಂಟಪವನ್ನು ನಿರ್ಮಿಸಿಕೊಟ್ಟಿದ್ದಾರೆ.