ಕನಸವಾಡಿ (ದೊಡ್ಡಬಳ್ಳಾಪುರ):‘ಜೀವನಪರ್ಯಂತ ಕಾನೂನು ಅಂತರ್ಗತವಾಗಿದೆ. ಪ್ರತಿಯೊಬ್ಬರೂ ಕಾನೂನಿನ ಅರಿವು ಮತ್ತು ಜ್ಞಾನ ಪಡೆದು ಸುಖಿಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು’ ಎಂದು ಸರ್ಕಾರಿ ಅಭಿಯೋಜಕ ನಾಗಭೂಷಣ್ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘ ಇವರ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಕಾನೂನು ಸಾಕ್ಷರತ ರಥದ ಮೂಲಕ ಕಾನೂನು ಅರಿವು-ನೆರವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಕಾನೂನು ಸಾಕ್ಷರತಾ ರಥದ ಮೂಲಕ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಉಚಿತವಾಗಿ ಕಾನೂನು ಅರಿವು ಮೂಡಿಸುವ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಜೀವನಾಂಶ ಕಾಯ್ದೆ ಬಗ್ಗೆ ವಿವರ ನೀಡಿದ ವಕೀಲ ರೇಣುಕಾರಾಧ್ಯ ಮಹಿಳೆಯರು ಮತ್ತು ವೃದ್ಧರು ದೌರ್ಜನ್ಯಕ್ಕೊಳಗಾದರೆ ಅಂತಹ ಸಂದರ್ಭದಲ್ಲಿ ಕಾನೂನಿನಡಿಯಲ್ಲಿ ಪಡೆಯಬಹುದಾದ ಸೌಲಭ್ಯಗಳ ಬಗ್ಗೆ ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷ ರಾ.ಬೈರೇಗೌಡ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಕಾನೂನಿನ ಸ್ಪಷ್ಟಜ್ಞಾನ ಪಡೆದರೆ ಯುವ ಪೀಳಿಗೆ ದೇಶದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ನಾಂದಿಯಾಗುತ್ತಾರೆ. ಈ ನಿಟ್ಟಿನಲ್ಲಿ ಶಾಲಾ ವಾತಾವರಣ ನಿರ್ಮಾಣಗೊಳ್ಳಬೇಕು. ಪಠ್ಯಕ್ರಮದಲ್ಲಿ ವಿಷಯ ಜ್ಞಾನದ ಜೊತೆಗೆ ದೈನಂದಿನ ಜೀವನದಲ್ಲಿ ಅನ್ವಯವಾಗುವ ಕಾಯ್ದೆ ಕಾನೂನುಗಳ ಪರಿಚಯ ಒದಗಿಸಬೇಕು’ ಎಂದರು.
ಕನಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ ಶಿವರಾಮ್ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಸುಮತಿ, ಪಿಡಿಒ ಸೂರ್ಯನಾರಾಯಣಸಿಂಗ್, ಸಿಡಿಪಿಒ ಲಕ್ಷ್ಮೀ, ಸಿಆರ್ಪಿ ನರಸಿಂಹಮೂರ್ತಿ ಇದ್ದರು.