ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರಿಂದಲೇ ಮರಳು ದಂಧೆ

ತಾಲ್ಲೂಕು ಆಡಳಿತದ ನಿರ್ಲಕ್ಷ್ಯ: ರೈತರ ಆರೋಪ
Last Updated 7 ಮೇ 2018, 9:06 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ವೇದಾವತಿ ನದಿ ಪಾತ್ರದ ವಿವಿಧೆಡೆ ಸರ್ಕಾರಿ ಟೆಂಡರ್‌ದಾರರಿಂದಲೇ ಮರಳು ಮಾಫಿಯಾ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಕೇಂದ್ರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂವಿಜ್ಞಾನ ನಿಯಮದ ಪ್ರಕಾರ 1.5(6 ಅಡಿ) ಮೀಟರ್‌ ಆಳದವರೆಗೆ  ಮಾತ್ರ ಭೂಮಿಯಿಂದ ಮರಳು ತೆಗೆಯಬೇಕು. ಆದರೆ, ತಾಲ್ಲೂಕಿನ 6 ಕಡೆ (ಬ್ಲಾಕ್‌ನಲ್ಲಿ) ಮರಳು ತೆಗೆಯಲು ಟೆಂಡರ್‌ ಮಾಡಿಕೊಂಡಿರುವವರು ನಿಯಮ ಉಲ್ಲಂಘಿಸಿ 30 ಅಡಿಗೂ ಹೆಚ್ಚು ಆಳದವರೆಗೂ ಭೂಮಿ ಅಗೆದು, ಗುಂಡಿ ಮುಚ್ಚುತ್ತಿದ್ದಾರೆ’ ಎಂದು ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಯಲಪ್ಪ ಆರೋಪಿಸುತ್ತಾರೆ.

‘ವೇದಾವತಿ ನದಿ ಪಾತ್ರದಲ್ಲಿ ಹಲವು ವರ್ಷಗಳಿಂದ ರಾಜಕೀಯ ಬಲಾಢ್ಯರಿಂದ ನಿರಂತರವಾಗಿ ಮರಳು ದಂಧೆ ನಡೆಯುತ್ತಿದೆ. ಈಗ ಮತ್ತೆ ಅದೇ ಜಾಗದಲ್ಲಿ 5 ವರ್ಷಗಳ ಕಾಲ ಮರಳು ತೆಗೆಯಲು ಸರ್ಕಾರ ಟೆಂಡರ್‌ ಕೊಟ್ಟಿರುವುದು ಸರಿಯಲ್ಲ. ಇದರಿಂದ ಮತ್ತಷ್ಟು ಮರಳಿನ ಅಕ್ರಮಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ’ ಎಂದು ಅವರು ದೂರುತ್ತಾರೆ.

‘ವೇದಾವತಿ ನದಿ ಒಡಲು ಬರಿದಾಗುತ್ತಿದ್ದರೂ  ಕಂದಾಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮರಳು ಗಣಿಗಾರಿಕೆ ನಿಲ್ಲಿಸಬೇಕು ಎಂದು ರೈತ ಮುಖಂಡರು ಬಲ್ಲಾಳಸಮುದ್ರ ಕಾವಲಿನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲಿ ಮಾತ್ರ ಮರಳು ಗಣಿಗಾರಿಕೆ  ನಿಲ್ಲಿಸಲಾಗಿದೆ. ಇನ್ನುಳಿದ ಕಡೆಗಳಲ್ಲಿ  ಮರಳು ತೆಗೆಯುತ್ತಿದ್ದರೂ  ತಾಲ್ಲೂಕು ಆಡಳಿತ ಸುಮ್ಮನಿದೆ’ ಎಂದು  ಹಸಿರು ಸೇನೆ ಹಾಗೂ ರೈತ ಸಂಘದ ತಾರೀಕೆರೆ ಕರಿಸಿದ್ದಯ್ಯ ಹೇಳುತ್ತಾರೆ.

‘ಒಂದೆಡೆ ತಾಲ್ಲೂಕಿನಲ್ಲಿ ಮೂರ್ನಾಲ್ಕು ವರ್ಷಗಳಿಂದ ಸಮೃದ್ಧವಾಗಿ ಮಳೆ ಬಂದಿಲ್ಲ. ಮತ್ತೊಂದೆಡೆ ಮರಳು ಗಣಿಗಾರಿಕೆಯಿಂದ ಅಂತರ್ಜಲ ಪಾತಾಳಕ್ಕಿಳಿದಿದೆ. ಜನರು ಹಾಗೂ ಜಾನುವಾರು ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಲಕ್ಷಾಂತರ ಖರ್ಚು ಮಾಡಿ ಬೆಳೆಸಿದ್ದ ತೆಂಗು, ಅಡಿಕೆ ತೋಟಗಳು ಒಣಗುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎನ್ನುತ್ತಾರೆ ದೊರೆಸ್ವಾಮಿ, ಹನುಮಂತಪ್ಪ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಮರಳು ದಂಧೆ ತಡೆಯಬೇಕು ಎಂಬುದು ಸ್ಥಳೀಯರ ಒತ್ತಾಯ.

‘ಗುತ್ತಿಗೆದಾರರಿಂದ ಅಕ್ರಮ ನಡೆದಿಲ್ಲ’

‘ಗುತ್ತಿಗೆದಾರರಿಂದ ಅಕ್ರಮ ನಡೆಯುತ್ತಿಲ್ಲ. ಅವರು ನಿಯಮಾನುಸಾರ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಟೆಂಡರ್‌ ಪ್ರಕ್ರಿಯೆ ಆರಂಭವಾಗುವ ಮೊದಲೇ ಜೋಗಮ್ಮನಹಳ್ಳಿ, ಲಿಂಗದಹಳ್ಳಿ ಸೇರಿದಂತೆ ಇನ್ನಿತರ ಕಡೆ ಅವ್ಯಾಹತವಾಗಿ ಮರಳು ಮಾಫಿಯಾ ನಡೆದು, ಸಾಕಷ್ಟು ಗುಂಡಿಗಳು ಇರುವುದರ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ಏಜೆನ್ಸಿಯಿಂದ ತನಿಖೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಕಾಶಿನಾಥ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**
ಗಣಿ ಮತ್ತು ಭೂವಿಜ್ಞಾನ ಇಲಾಖೆ ಮರಳು ಟೆಂಡರ್‌ ನೀಡಿದೆ. ಹಾಗಾಗಿ ಈ ಬಗ್ಗೆ ಆ ಇಲಾಖೆ ಉಪನಿರ್ದೇಶಕರಿಂದಲೇ ಮಾಹಿತಿ ಪಡೆಯಬೇಕು
– ಎಂ.ಪಿ.ಕವಿರಾಜು, ತಹಶೀಲ್ದಾರ್‌

ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT