ವಿಜಯಪುರ: ಶರಣ ಸಾಹಿತ್ಯವನ್ನು ಎಲ್ಲೆಡೆ ಪಸರಿಸಬೇಕು. ಎಲ್ಲರಲ್ಲೂಉತ್ತಮ ಸಂಸ್ಕಾರ ಬೆಳೆಸಬೇಕು ಎನ್ನುವ ತುಡಿತ ಹೊಂದಿದ್ದ ಸಾಹಿತಿ ಸಿ.ಎಂ.ವೀರಣ್ಣ ಯುವಪೀಳಿಗೆಗೆ ಆದರ್ಶ ಪ್ರಾಯರು ಎಂದು ಪುರಸಭಾ ಸದಸ್ಯ ಎಸ್.ಭಾಸ್ಕರ್ ಅಭಿಪ್ರಾಯಪಟ್ಟರು.
ಇಲ್ಲಿನ ಸಂತೆಬೀದಿಯಲ್ಲಿರುವ ಕನ್ನಡ ಕಲಾವಿದರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ಸಾಹಿತ್ಯ ಓದಬೇಕು ಎನ್ನುವ ಹಂಬಲ ಹೊಂದಿದ್ದ ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, 95 ವರ್ಷಗಳ ಸಾರ್ಥಕ ಜೀವನ ಸಾಗಿಸಿದ ವೀರಣ್ಣ ಇತರರಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಡಾ.ವಿ.ಎನ್.ರಮೇಶ್ ಮಾತನಾಡಿ, ಬದುಕಿನಲ್ಲಿ ನಿಸ್ವಾರ್ಥ,ಸ್ವಾಭಿಮಾನ, ಪರೋಪಕಾರ, ಶ್ರದ್ಧೆ, ನಿಷ್ಠೆ ಮೈಗೂಡಿಸಿಕೊಂಡು ಸರ್ವರಿಗೂ ಒಳಿತು ಮಾಡುವ ಗುಣ ಹೊಂದಿದ್ದ ವೀರಣ್ಣ ಅವರ ಬದುಕನ್ನು ಶ್ಲಾಘಿಸಿದರು.
ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್, ಬಿಎಸ್ಎನ್ಎಲ್ ನಾಮಿನಿ ನಿರ್ದೇಶಕ ಕನಕರಾಜು, ಮುಕುಂದರಾವ್ ನುಡಿನಮನ ಸಲ್ಲಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು, ರವಿಕುಮಾರ್, ವೆಂಕಟಪತಿ, ವೆಲ್ಡರ್ ಮುನಿಮಾರಪ್ಪ, ಮುರಳಿ (ಮಗು) ಇದ್ದರು.