ಆನೇಕಲ್: ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ. ಸೇವಾ ಚಟುವಟಿಕೆಗಳು ಸಂಘಗಳ ಜೀವಂತಿಕೆಯ ಪ್ರತೀಕವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿ.ಲಕ್ಷ್ಮೀನಾರಾಯಣ್ ತಿಳಿಸಿದರು.
ಅವರು ತಾಲ್ಲೂಕಿನ ಜಿಗಣಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಗಣಿಯ ಲಯನ್ಸ್ ಕ್ಲಬ್ ಲಾಕ್ಡೌನ್ ಸಂದರ್ಭದಲ್ಲಿ ಹಲವು ಕುಟುಂಬಗಳಿಗೆ ನೆರವು ನೀಡುವ ಮೂಲಕ ಈ ಭಾಗದಲ್ಲಿ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಸೇವೆಯಿಂದ ಮನಸ್ಸಿಗೆ ತೃಪ್ತಿ ದೊರೆಯುತ್ತದೆ. ಸರ್ಕಾರ ನೀಡುವ ಪ್ರಶಸ್ತಿಗಳು ಮತ್ತಷ್ಟು ಸೇವೆ ಮಾಡಲು ಉತ್ಸಾಹ ನೀಡುತ್ತದೆ. ಪ್ರಶಸ್ತಿ ಸ್ವೀಕಾರದಿಂದ ಜವಬ್ದಾರಿ ಹೆಚ್ಚಾಗಿದೆ ಎಂದರು.
ಜಿಗಣಿ ಲಯನ್ಸ್ ಕ್ಲಬ್ನ ಎಚ್.ಆರ್.ಪ್ರಭಾಕರ್ ಮಾತನಾಡಿ ಲಕ್ಷ್ಮೀನಾರಾಯಣ್ ಅವರು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಜಿಗಣಿ ಭಾಗದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಮನೆ ಮಾತಾಗಿದ್ದಾರೆ. ದೇವಾಲಯ, ವೃದ್ಧಾಶ್ರಮ, ಆರೋಗ್ಯ ಕೇಂದ್ರ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಜಿಗಣಿ ನಿಸರ್ಗ ಬಡಾವಣೆಯಲ್ಲಿ ತೆರೆಯುವ ಮೂಲಕ ಈ ಭಾಗದ ಸಾಂಸ್ಕೃತಿಕ ನೇತಾರರಾಗಿದ್ದಾರೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ರೆಫಲ್ ಅಂಥೋನಿ, ಮುಖಂಡರಾದ ಶ್ರೀಧರ್, ಕೆ.ಪ್ರಕಾಶ್, ಕೇಶವ, ಮಂಜುನಾಥ್, ಮಾರಪ್ಪ, ಹಾಜರಿದ್ದರು.