ದೇವನಹಳ್ಳಿ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಕಣ ರಂಗೇರಿದೆ. ಶತಾಯಗತಾಯ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿರುವ ಅಭ್ಯರ್ಥಿಗಳು ಕುಕ್ಕರ್, ಸೀರೆ ಜತೆಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಿರಿಯಾನಿ, ಮದ್ಯದ ಪಾರ್ಟಿಗಳನ್ನು ಆಯೋಜಿಸಿ ಮತದಾರರನ್ನು ಕಡೇ ಕ್ಷಣದಲ್ಲಿ ಸೆಳೆಯುವ ಪ್ರಯತ್ನ ನಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪ್ರತಿಷ್ಠೆ ಕಣವಾಗಿದ್ದು ಅಪಾರವಾದ ದುಂದುವೆಚ್ಚ ನಡೆಯುತ್ತಿದೆ ಎಂದು ಹೇಳುತ್ತಾರೆ ಅಭ್ಯರ್ಥಿಯೊಬ್ಬರು.
ಈಗಾಗಲೇ ಮತದಾನದ ಆಮಿಷವಾಗಿ ಕೋಳಿ, ಕುರಿ ಮತ್ತು ಹಂದಿ ಮಾಂಸದ ಟೋಕನ್ ವಿತರಿಸಲಾಗಿದೆ. ಯಾವುದೇ ಎಗ್ಗಿಲ್ಲದೆ ಮದ್ಯ ಹಂಚಿಕೆ ನಡೆದಿದೆ ಎನ್ನುತ್ತಾರೆ ಸ್ಥಳೀಯರಾದ ರಾಮಣ್ಣ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಪಂಚಾಯಿತಿ ಚುನಾವಣೆ ಪ್ರತಿಷ್ಠೆಯಾಗಿದೆ. ತಂತ್ರ, ಪ್ರತಿತಂತ್ರ ಜತೆಗೆ ವಿವಿಧ ರೀತಿ ಕಸರತ್ತು ನಡೆದಿದೆ.