ವಿಜಯಪುರ: ಪರಸ್ಪರ ಸಹಕಾರಿಗಳಾಗಿ ಬದುಕುವುದನ್ನು ರೂಢಿಸಿಕೊಂಡಾಗ ಮಾತ್ರವೇ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಪ್ಪ ಹೇಳಿದರು.
ಹೋಬಳಿಯ ಚಿಕ್ಕತತ್ತಮಂಗಲ ಗ್ರಾಮದ ಡೇರಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಚಿಕ್ಕಬಸಪ್ಪ, ಉಪಾಧ್ಯಕ್ಷ ಎಂ. ಚಿನ್ನಪ್ಪ ಹಾಗೂ ನಿರ್ದೇಶಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಸಂಘದ ಪದಾಧಿಕಾರಿಗಳು, ನಿರ್ದೇಶಕರು ಪ್ರತಿದಿನ ಇಲ್ಲಿಗೆ ಬಂದು ಉತ್ಪಾದನೆಯಾಗುತ್ತಿರುವ ಹಾಲಿನ ಪ್ರಮಾಣ, ಅದರ ಗುಣಮಟ್ಟ, ಉತ್ಪಾದಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಬೇಕು. ಜತೆಗೆ ಸಂಘದ ಏಳಿಗೆಗೆ ಅಗತ್ಯವಾಗಿರುವ ಸಲಹೆಗಳನ್ನು ಕೊಟ್ಟು ಅಭಿವೃದ್ಧಿಯತ್ತ ಮುನ್ನಡೆಸಿಕೊಂಡು ಹೋಗಬೇಕು ಎಂದರು.
ಮುಖಂಡ ಎಂ. ಮುನಿ ಆಂಜಿನಪ್ಪ ಮಾತನಾಡಿ, ‘ಡೇರಿಗಳು ನಮ್ಮ ಪಾಲಿಗೆ ಜೀವನಾಡಿಗಳು, ತೀವ್ರ ಬರಗಾಲದಲ್ಲಿ ಉದ್ಯೋಗಗಳಿಲ್ಲದೆ ವಲಸೆ ಹೋಗುವಂತಹ ಪರಿಸ್ಥಿತಿ ಬಂದರೂ ಹೈನುಗಾರಿಕೆ ನಮ್ಮೆಲ್ಲರನ್ನೂ ಕಾಪಾಡುತ್ತಿದೆ. ಉತ್ಪಾದಕರು ತುಂಬಾ ಕಷ್ಟಪಟ್ಟು, ಮೇವು ತಂದು ಒಂದೊಂದು ಹನಿ ಹಾಲನ್ನು ಉತ್ಪಾದನೆ ಮಾಡಿ ಸಂಘಕ್ಕೆ ಕೊಡುತ್ತಿದ್ದಾರೆ. ಅವರು ಸಂಘದ ಮೇಲೆ ಇಟ್ಟಿರುವ ನಂಬಿಕೆಗೆ ಕಿಂಚಿತ್ತೂ ದ್ರೋಹ ಬಗೆಯದಂತೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು’ ಎಂದರು.
ನಿರ್ದೇಶಕರಾಗಿ ನಾರಾಯಣಪ್ಪ, ದೊಡ್ಡನಾರಾಯಣಪ್ಪ, ಚಿಕ್ಕವೆಂಕಟಪ್ಪ, ಅಕ್ಕಯಮ್ಮ, ಸಿ. ತಿಮ್ಮರಾಯಪ್ಪ, ಡಿ.ತಿಮ್ಮರಾಯಪ್ಪ, ಸರ್ಕಾರಿ ನಾಮಕರಣ ನಿರ್ದೇಶಕ ಮುನಿನಾರಾಯಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯೆ ಜಿ.ವಿ. ಮುನಿರತ್ನಮ್ಮ ನಾಗರಾಜು, ಡೇರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ. ವೀರಭದ್ರಪ್ಪ, ಎಂ. ತಿಮ್ಮರಾಯಪ್ಪ, ರಾಮಯ್ಯ ಮುನಿಯಪ್ಪ, ಪಾಪಣ್ಣ, ಹಾಲು ಪರೀಕ್ಷಕ ಡಿ. ಚಿಕ್ಕವೀರಪ್ಪ, ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರನ್ನು ಅಭಿನಂದಿಸಿದರು.