ರೈತ ಸುರೇಶ್ ಮಾತನಾಡಿ, ರೈತರು ಒಂದರ್ಥದಲ್ಲಿ ಪ್ರಾಕೃತಿಕ ಶಾಪಕ್ಕೆ ಒಳಗಾಗಿದ್ದೇವೆ. ರಾಜಕಾರಣಿಗಳು ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ಮಾತುಗಳು ಆಶ್ವಾಸನೆಗಳಾಗಿಯೇ ಉಳಿಯುತ್ತಿವೆ. ಮತ್ತೊಂದು ಕಡೆಗೆ ಮಳೆಯು ಬಾರದೆ, ನಾವು ಯಾವ ಬೆಳೆಗಳನ್ನು ಇಟ್ಟರೂ ಅವುಗಳಿಗೆ ಸೂಕ್ತವಾದ ಬೆಲೆಗಳು ಸಿಗದೆ ಕಂಗಾಲಾಗುತ್ತಿದ್ದೇವೆ. ಈಗ ಮಾವಿನ ಬೆಳೆಯಲ್ಲಾದರೂ ಒಂದಷ್ಟು ಹಣ ಬಂದರೆ, ಕನಿಷ್ಠ ಸಾಲಗಳನ್ನಾದರೂ ತೀರಿಸಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಈಗ ಬಿಟ್ಟಿರುವ ಫಸಲು ಉದುರುವ ಹಂತಕ್ಕೆ ಬಂದಿದೆ. ಹೂ ಉಳಿಸಿಕೊಳ್ಳಲಿಕ್ಕೂ ಔಷಧಿಗಳನ್ನು ಸಿಂಪಡಣೆ ಮಾಡಿದ್ದೇವು. ಈಗ ಅಷ್ಟು ಕಷ್ಟಪಟ್ಟಿದ್ದು ವ್ಯರ್ಥವಾಗುತ್ತಿದೆ ಎಂದರು.