ಹೊಸಕೋಟೆ: ವಿಧಾನ ಪರಿಷತ್ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಶೇ 99.48ರಷ್ಟು ಮತದಾನವಾಗಿದೆ.
ಒಟ್ಟು 582 ಮತಗಳ ಪೈಕಿ 579 ಮತಗಳು ಚಲಾವಣೆಯಾಗಿವೆ. ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ, ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಜಡಗೇನಹಳ್ಳಿ ಹೋಬಳಿಯ ಓರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹಕ್ಕು ಚಲಾಯಿಸಿಲ್ಲ ಎಂದು ತಿಳಿದುಬಂದಿದೆ.
ಕುಂಬಳಹಳ್ಳಿ ಪಂಚಾಯಿತಿ ಸದಸ್ಯ ಶಬರಿಮಲೆಗೆ ಹೋದ ಕಾರಣ ಮತ ಚಲಾವಣೆ ಮಾಡಿಲ್ಲ. ಉಳಿದ ಇಬ್ಬರು ಮತ ಚಲಾವಣೆ ಮಾಡದಿರುವುದಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಎಂಎಲ್ಸಿಗಳು ಮತ ಚಲಾಯಿಸುವ ಹಕ್ಕು ಹೊಂದಿಲ್ಲ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.