ದೊಡ್ಡಬಳ್ಳಾಪುರ: ತಾಲ್ಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿ ಕಟಾವು ಮಾಡಿ ಬಣವೆ ಹಾಕಲಾಗಿದ್ದ ಸುಮಾರು ₹2 ಲಕ್ಷ ಮೌಲ್ಯದ ರಾಗಿ ಬೆಳೆಗೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಬಣವೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ನೆಲ್ಲುಕುಂಟೆ ಗ್ರಾಮದ ಕಾಳಾನಾಯಕ ಎಂಬ ರೈತರಿಗೆ ಸೇರಿರುವ ಸುಮಾರು 4 ಎಕರೆ ಭೂಮಿಯಲ್ಲಿ ಬೆಳೆಯಲಾಗಿದ್ದ ರಾಗಿ ಬೆಳೆಯನ್ನು 4 ಬಣವೆಗಳನ್ನಾಗಿ ಹಾಕಿದ್ದರು. ಆದರೆ ಕಿಡಿಗೇಡಿಗಳ ಕೃತ್ಯದಿಂದಾಗಿ ಬಣವೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು ರೈತ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.
ತಾಲ್ಲೂಕು ಆಡಳಿತ ರೈತನ ನೆರವಿಗೆ ದಾವಿಸಬೇಕು. ಬೆಳೆ ನಷ್ಟ ಪರಿಹಾರ ಅಡಿಯಲ್ಲಿ ರೈತನಿಗೆ ಪರಿಹಾರ ನೀಡಬೇಕು ಎಂದು ತಿಪ್ಪೂರು ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.