ಹೊಸಕೋಟೆ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ನೀಡಿರುವ ಭರವಸೆಯಂತೆ ತಮಗೆ ಸಚಿವ ಸ್ಥಾನ ನೀಡುತ್ತಾರೆ. ಆದರೆ ಕೆಲವು ಕಾರಣಗಳಿಂದ ಅದು ವಿಳಂಬವಾಗಿದ್ದು ಅದಕ್ಕೆ ಬೇರೆ ಯಾವುದೇ ಕಾರಣವಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ತಿಳಿಸಿದರು.
ಅವರು ನಗರದ 28ನೇ ವಾರ್ಡಿನಲ್ಲಿ ನಗರಸಭಾ ಸದಸ್ಯೆ ಆಶಾ ರಾಜಶೇಖರ್ ಅವರು ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸಿ ಮಾತನಾಡುತ್ತಿದ್ದರು. ‘ನಾಳೆಯಿಂದ ಪ್ರಾರಂಭವಾಗುವ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ತಮಗೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಹಾಗೂ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.
‘ನಗರದಲ್ಲಿರುವ 31 ವಾರ್ಡ್ಗಳಲ್ಲಿ ಈಗಾಗಲೇ 24 ವಾರ್ಡ್ಗಳಲ್ಲಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಉಳಿದ ವಾರ್ಡ್ಗಳು ಹಾಗೂ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ವಿತರಿಸಲಾಗುತ್ತದೆ’ ಎಂದರು.
ನಗರಸಭಾ ಸದಸ್ಯೆ ಆಶಾ ರಾಜಶೇಖರ್ ಮಾತನಾಡಿ, ‘ತಮ್ಮ ವಾರ್ಡ್ನಲ್ಲಿರುವ 1,700ಕ್ಕೂ ಅಧಿಕ ನಾಗರಿಕರಿಗೆ ಆಪತ್ ಕಾಲದಲ್ಲಿ ಸಹಾಯಕ್ಕೆ ಬರುವ ಈ ಕಾರ್ಡ್ಗಳನ್ನು ಎಂ.ಟಿ.ಬಿ. ನಾಗರಾಜ್ ಅವರು ಮಾರ್ಗದರ್ಶನದಲ್ಲಿ ವಿತರಿಸಲಾಗುತ್ತಿದೆ’ ಎಂದರು.
ಟೌನ್ ಬ್ಯಾಂಕ್ ನಿರ್ದೇಶಕ ರಾಜಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ನಾಗರಾಜ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ. ಜಯರಾಜ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸಂತೋಷ್ ಚಕ್ರವರ್ತಿ ಇದ್ದರು.