ವಿಜಯಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಅವರ ಬೆಂಬಲಿಗರು ಇಲ್ಲಿನ ಗಾಂಧಿ ಚೌಕದಿಂದ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದರು.
ಮೋದಿ..ಮೋದಿ..ಮೋದಿ..ಎಂದು ಘೋಷಣೆಗಳನ್ನು ಕೂಗುತ್ತಾ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿಕೆ ಮಾಡಿ ಹರ್ಷ ವ್ಯಕ್ತಪಡಿಸಿದರು.
ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್ ಮಾತನಾಡಿ, ‘ಮೋದಿಯನ್ನು ಸೋಲಿಸಬೇಕು ಎಂದು ದೇಶದಲ್ಲಿ ಮಹಾ ಘಟಬಂಧನ್ ರಚನೆ ಮಾಡಿಕೊಂಡರೂ ದೇಶದ ಪ್ರಜ್ಞಾವಂತ ಮತದಾರರು ಅವರಿಗೆ ಸೂಕ್ತವಾದ ಉತ್ತರ ಕೊಡುವ ಮೂಲಕ ದೇಶದ ರಕ್ಷಕರಿಗೆ ನಮ್ಮ ಬೆಂಬಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ’ ಎಂದರು.
ಮುಖಂಡ ಕನಕರಾಜು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟಿರುವ ಜನರು ಸೂಕ್ತವಾದ ತೀರ್ಪು ಕೊಟ್ಟಿದ್ದಾರೆ. 5 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಜಾರಿಗೆ ತಂದಿರುವ ಎಲ್ಲ ಕಾರ್ಯಕ್ರಮಗಳು ಈ ದೇಶದ ಬಡವರ ಪರವಾಗಿರುವುದರಿಂದ ವಿರೋಧ ಪಕ್ಷಗಳವರ ಮಾತುಗಳಿಗೆ ಕಿವಿಗೊಡದ ಮತದಾರರು ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.
ಮುಂದಿನ 5 ವರ್ಷಗಳಲ್ಲಿ ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಜನರು ತೀರ್ಪು ನೀಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೂ ಅಭಿವೃದ್ಧಿಯ ಶೂನ್ಯವನ್ನು ಕಂಡಿದ್ದ ಜನರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದರು.
ಶಿವಗಣೇಶ ಸರ್ಕಲ್, ಬಸ್ ನಿಲ್ದಾಣಗಳಲ್ಲಿ ಬಿಜೆಪಿ ಪರವಾಗಿ ಘೋಷಣೆ ಕೂಗಿದರು. ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗಿರೀಶ್, ನಾಗರಾಜಗೌಡ, ಸಾಗರ್, ರಜನಿ ಕನಕರಾಜು, ನಾಗರಾಜ ಗೌಡ, ಬಸವರಾಜ್, ಮನೋಹರ್, ಪ್ರದೀಪ್, ವೆಂಕಟೇಶ್ ಪ್ರಭು, ರಾಘವ, ನಟರಾಜ್ ಇದ್ದರು.