ದೇವನಹಳ್ಳಿ: ‘ಇಂದಿನ ಯುವ ಸಮುದಾಯದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಕೆಂಪರಾಜು ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಆರ್ಸಿಎಂ ಕಾಲೇಜು ಸಭಾಂಗಣದಲ್ಲಿ ‘ಹ್ಯಾಪಿ ಕ್ಲಾಸ್ ರನ್ನಿಂಗ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವರ್ತಮಾನಕ್ಕೆ ತಕ್ಕಂತೆ ಬದಲಾಗುವುದು ಅಗತ್ಯ. ಶೈಕ್ಷಣಿಕ ವ್ಯವಸ್ಥೆಗೆ ಅನುಗುಣವಾಗಿ ಮಾರ್ಪಾಡಾಗಬೇಕಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳು ಮೌಲ್ಯ ಬಿತ್ತುವ ಕೆಲಸ ಮಾಡಬೇಕು. ಅಂತೆಯೇ ಮಕ್ಕಳು ಪೋಷಕರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಂಡು ಹೆತ್ತವರಿಗೆ ನೆರವಾಗಬೇಕು’ ಎಂದು ಹೇಳಿದರು.
‘ಕಾಲೇಜು ಎಂದರೆ ಮೊಜು ಮಸ್ತಿ ಮಾಡುವುದಲ್ಲ. ಬೋಧನಾ ವಿಷಯಗಳನ್ನು ಮನನ ಮಾಡಿಕೊಂಡು, ಸ್ನೇಹಿತರಲ್ಲಿ ಪರಸ್ಪರ ಚರ್ಚಿಸಿ ಉತ್ತಮ ಫಲಿತಾಂಶ ಪಡೆದರೆ, ಕಾಲೇಜು ಮತ್ತು ಪೋಷಕರಿಗೆ ಹೆಮ್ಮೆ ಎನಿಸುತ್ತದೆ. ವೈಯಕ್ತಿಕ ದ್ವೇಷ, ಸ್ವಾರ್ಥ ಮನೋಭಾವದಿಂದ ಹೊರಬರಬೇಕು. ಸಾಮಾಜಿಕ ಕಾಳಜಿ ಇರಬೇಕು’ ಎಂದು ಹೇಳಿದರು.
ಆರ್ಸಿಎಂ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಸ್.ಆರ್.ಮಂಡಲ್ ಮಾತನಾಡಿ ‘ವಿದ್ಯಾರ್ಥಿಗಳಿಗೆ ಸೃಜನಾತ್ಮಕ, ಉಲ್ಲಸಿತ ಕಾರ್ಯಕ್ರಮಗಳ ಆಯೋಜನೆ ಮಾಡಬೇಕು. ಸಂಗೀತ, ನಾಯಕತ್ವ ಶಿಬಿರ, ಕೌಶಲ ಮತ್ತು ಮಾರ್ಗದರ್ಶಿ ಕಾರ್ಯಕ್ರಮಗಳು ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕ. ಆಂತರಿಕ ಶಕ್ತಿ ವೃದ್ಧಿಸಿಕೊಳ್ಳಬೇಕು’ ಎಂದರು.