ದೇವನಹಳ್ಳಿ:ಕೋವಿಡ್ ಮೂರನೇ ಅಲೆಯ ಭೀತಿ ನಡುವೆಯೂ ಗುರುವಾರ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಆಕಾಶ್ ಪದವಿ ಕಾಲೇಜಿನಲ್ಲಿ ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶಕ್ಕೆ ಮಕ್ಕಳು ಪರೀಕ್ಷೆ ಬರೆದರು.
ಒಂದು ಕಡೆ ಕೋವಿಡ್ ಭಯ, ಮತ್ತೊಂದು ಕಡೆ ಮಕ್ಕಳಿಗೆ ಮಾಹಿತಿ ಕೊರತೆಯಿಂದಾಗಿ ಸಮರ್ಪಕವಾದ ತಯಾರಿಯಿಲ್ಲದೆ ಹಾಜರಾಗಿದ್ದ ಬಹುತೇಕ ಮಕ್ಕಳು, ಗೊಂದಲದಲ್ಲಿಯೇ ಪರೀಕ್ಷೆ ಬರೆಯುವಂತಾಯಿತು. ಬಹುತೇಕ ಮಕ್ಕಳಿಗೆ ಇಂದು ಪರೀಕ್ಷೆ ಇರುವ ಮಾಹಿತಿಯೂ ಇಲ್ಲದೆ ಹೊರಗುಳಿಯುವಂತಾಗಿದೆ.
ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಮಯದಲ್ಲಿ ಭೌತಿಕ ತರಗತಿ ನಡೆಯಲಿಲ್ಲ. 5ನೇ ತರಗತಿಯಲ್ಲಿ ವ್ಯಾಸಂಗ ಮಾಡಬೇಕಾಗಿದ್ದ ಮಕ್ಕಳು ನೇರವಾಗಿ ಉತ್ತೀರ್ಣರಾಗಿದ್ದಾರೆ. ಪ್ರವೇಶಕ್ಕೆ ನಡೆಯುವಂತಹ ಪರೀಕ್ಷೆ ಬಹುತೇಕ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದಾಗಿರುವ ಕಾರಣ ಸಾಕಷ್ಟು ತಯಾರಿ ಬೇಕಾಗುತ್ತದೆ ಎಂದು ಪೋಷಕರು ತಿಳಿಸಿದರು.
ಆದರೆ, ಇಂದು ನಡೆದ ಪರೀಕ್ಷೆಗೆ ಪೂರ್ವ ತಯಾರಿ ಮಾಡಿಕೊಳ್ಳಲಿಕ್ಕೆ ಅವಕಾಶವಿಲ್ಲದ ಕಾರಣ ಬಹುತೇಕ ಮಕ್ಕಳು ಪರೀಕ್ಷಾ ಕೇಂದ್ರದ ಕಡೆಗೆ ಬಂದಿರಲಿಲ್ಲ. ಕೆಲವು ಮಕ್ಕಳು ಬೆಳಿಗ್ಗೆ 11.30 ಗಂಟೆಯವರೆಗೂ ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದ ದೃಶ್ಯಗಳು ಕಂಡುಬಂದಿತು.
ಪೋಷಕರು ತಮ್ಮ ಮಕ್ಕಳನ್ನು ತರಾತುರಿಯಲ್ಲಿ ಕರೆದುಕೊಂಡು ಬಂದು ಪರೀಕ್ಷಾ ಕೇಂದ್ರಕ್ಕೆ ಬಿಡುತ್ತಿದ್ದರು.
ಇಂದು ಪರೀಕ್ಷೆ ಇರುವ ಕುರಿತು ಶಿಕ್ಷಕರು ಕೂಡ ತಿಳಿಸಿರಲಿಲ್ಲ. ಆದ್ದರಿಂದ ಮಕ್ಕಳನ್ನು ತಡವಾಗಿ ಕರೆದುಕೊಂಡು ಬಂದು ಬಿಡುತ್ತಿದ್ದೇವೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.
ಪರೀಕ್ಷಾರ್ಥಿಗಳ ದೈಹಿಕ ಉಷ್ಣತೆ ಪರೀಕ್ಷೆ ಮಾಡಿ, ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಯಿತು. ಪರೀಕ್ಷೆಗೆ ಸಿದ್ಧಪಡಿಸಿದ್ದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿತ್ತು. ಪರೀಕ್ಷೆಗೆ ನೇಮಕಗೊಂಡಿದ್ದ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದರು.