ಹೊಸಕೋಟೆ: ‘ಎಂಟಿಬಿ ನಾಗರಾಜ್ ಜನರನ್ನು ನಂಬಿಸಿ ಕೆಲಸವಾದಮೇಲೆ ಕೈ ಬಿಡುತ್ತಾರೆ. ಅವರು ಬಾಯಿ ಬಿಟ್ಟರೆ ಕೇವಲ ಸುಳ್ಳೇ ಬರುತ್ತದೆ’ ಎಂದು ಅವರ ಅಣ್ಣ ಪಿಳ್ಳಣ್ಣ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ನಾನು ಸಹ 50 ವರ್ಷ ರಾಜಕೀಯ ಮಾಡಿಯೇ ಬಂದಿರುವವನು. ಅವನಿಗೆ ಒಳ್ಳೆಯದನ್ನು ಮಾಡಿದವರಿಗೆ ಅವನು ಬೈಯ್ಯುತ್ತಾನೆ. ಸಿದ್ದರಾಮಯ್ಯನವರ ಹತ್ತಿರ ನನ್ನ ಬಗ್ಗೆ ಹೇಳಿ ನನ್ನ ಅಧಿಕಾರ ಕಿತ್ತುಹಾಕಿಸಿದ್ದು ಎಂಟಿಬಿ ನಾಗರಾಜ್’ ಎಂದು ದೂರಿದರು.
‘ನಾನು ಅವನಿಗೆ ತಂದೆಯ ಸಮಾನ. ನನಗೆ ಮೋಸ ಮಾಡಿದ್ದಾನೆ. ತಾಲ್ಲೂಕಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಟ್ಟ ಅನುದಾನದ ಹಣವೇ ಹೊರತು ಅವರ ಮನೆಯಿಂದ ಹಣ ತಂದು ತಾಲ್ಲೂಕಿನ ಅಭಿವೃದ್ಧಿ ಮಾಡಿಲ್ಲ. ಬೇಕಿದ್ದರೆ ದೇವರ ಮುಂದೆ ಬರಲಿ, ಅವನು ಮಾಡಿರುವ ಮೋಸಗಳನ್ನು ಹೇಳುತ್ತೇನೆ’ ಎಂದು ಸವಾಲು ಹಾಕಿದರು.