ವಿಜಯಪುರ: ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಎನ್ಎಸ್ಎಸ್ ಶಿಬಿರ ಸಹಕಾರಿಯಾಗಿದೆ. ಜೊತೆಗೆ ರಾಷ್ಟ್ರಪ್ರೇಮ, ದೇಶಭಕ್ತಿಯನ್ನೂ ಮೈಗೂಡಿಸಿಕೊಳ್ಳಬಹುದು. ವೈಜ್ಞಾನಿಕ ಚಿಂತನೆಯ ಬಗ್ಗೆಯೂ ಶಿಬಿರದಲ್ಲಿ ಚರ್ಚಿಸಬಹುದು’ ಎಂದು ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಬಿ. ಶರಣಪ್ಪ ಹೇಳಿದರು.
ಚನ್ನರಾಯಪಟ್ಟಣ ಹೋಬಳಿಯ ಐಬಸಾಪುರ ಗ್ರಾಮದಲ್ಲಿ ಐ.ಐ.ಬಿ.ಎಸ್ (ಅಂತರರಾಷ್ಟ್ರೀಯ ವ್ಯವಹಾರ ಅಧ್ಯಯನ ಸಂಸ್ಥೆ ) ಕಾಲೇಜಿನಿಂದ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಬದ್ಧತೆ ಬೆಳೆಸುತ್ತದೆ. ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಪಠ್ಯದ ಜೊತೆಗೆ ಸಮುದಾಯದ ಪರಿಚಯ, ಸೇವೆ, ಸ್ವಚ್ಛತೆ, ಅರಿವು, ಸಂಸ್ಕೃತಿಯ ಪ್ರದರ್ಶನಕ್ಕೆ ಶಿಬಿರ ಪೂರಕವಾಗಿದೆ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಮುಖಂಡ ಬಿ. ರಾಜಣ್ಣ ಮಾತನಾಡಿ, ಉದ್ಯೋಗ ಪಡೆಯುವುದಕ್ಕೆ ಪಠ್ಯ ನೆರವಿಗೆ ಬಂದರೆ, ಜೀವನ ನಡೆಸುವುದಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಶಿಬಿರದ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳ ಬೇಕು. ಆಗ ವಿದ್ಯಾರ್ಥಿಜೀವನ ಸಾರ್ಥಕವಾಗುತ್ತದೆ ಎಂದು ಆಶಿಸಿದರು.
ಗ್ರಾಮದ ಸ್ವಚ್ಛತೆಯ ಜೊತೆಗೆ ಗ್ರಾಮೀಣರಲ್ಲಿ ಆರೋಗ್ಯದ ಅರಿವು, ಮೌಢ್ಯ ನಿರ್ಮೂಲನೆ ಬಗ್ಗೆಯೂ ಅರಿವು ಮೂಡಿಸಬೇಕು ಎಂದರು.
ಐ.ಐ.ಬಿ.ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ತ್ರಿಪುರಾನೇಮಿ ಜಗ್ಗ ಮಾತನಾಡಿ, ‘ಎನ್ಎಸ್ಎಸ್ ಶಿಬಿರದಿಂದ ರಾಷ್ಟ್ರೀಯತೆ, ಭಾವೈಕ್ಯ, ಸಹಬಾಳ್ವೆ, ನಾಯಕತ್ವದ ಗುಣ ಬೆಳೆಯುತ್ತದೆ ಎಂದರು.
ಸಮಾರಂಭದಲ್ಲಿ ಡಾ.ಬಸವರಾಜ್, ಐ.ಎಸ್. ಆನಂದ್, ಆಂಜಿನಪ್ಪ, ಟಿ. ರಾಮೇಗೌಡ, ಶಂಕರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾರಾಣಿ, ಮಂಡಿಬೆಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು, ವೆಂಕಟೇಶ್ ಹಾಜರಿದ್ದರು.