ದೊಡ್ಡತುಮಕೂರು (ದೊಡ್ಡಬಳ್ಳಾಪುರ):ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ವಿಶೇಷ ವಾರ್ಷಿಕ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕೊಂಗಾಡಿಯಪ್ಪ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ ಮಾತನಾಡಿ, ರೈತರಿಂದ ಬದುಕಿನ ಮೌಲ್ಯಗಳನ್ನು ಕಲಿಯಬೇಕಿದೆ. ಎನ್ಎಸ್ಎಸ್ನಂಥ ಶಿಬಿರಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಪರಿಪೂರ್ಣಗೊಳ್ಳುತ್ತದೆ. ಪಠ್ಯ ಪುಸ್ತಕಗಳ ಜತೆಗೆ ಗ್ರಾಮೀಣ ಬದುಕಿನ ಲಯವನ್ನು ಹತ್ತಿರದಿಂದ ಅರ್ಥ ಮಾಡಿಕೊಳ್ಳಲು ಇಂಥ ಶಿಬಿರಗಳು ಸಹಕಾರಿಯಾಗುತ್ತವೆ ಹಾಗೂ ಇದರಿಂದ ದೇಶದ ಅಭಿವೃದ್ಧಿಗೆ ದುಡಿಯಬೇಕಾದ ಯುವಜನತೆಗೆ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಶಿಬಿರಗಳಲ್ಲಿ ಶಿಬಿರಾರ್ಥಿಗಳು ತಾವು ಪಡೆದ ಅರಿವನ್ನು ಗ್ರಾಮಸ್ಥರಿಗೂ ಮೂಡಿಸಬೇಕಿದ್ದು, ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಸುದರ್ಶನ್, ಗ್ರಾಮದ ಮುಖಂಡರಾದ ಟಿ.ಜಿ.ಮಂಜುನಾಥ್, ನಾಗರಾಜು, ಮಹಾಲಕ್ಷ್ಮೀ, ರಾಮಕೃಷ್ಣ, ಉಪಾನ್ಯಾಸಕರಾದ ರಾಮಚಂದ್ರಪ್ಪ, ಶ್ರೀನಿವಾಸ್ ಭಾಗವಹಿಸಿದ್ದರು.