ಈ ಕುರಿತು ಮಾಹಿತಿ ನೀಡಿದ ರೈತರಾದ ಮುನಿನಂಜಪ್ಪ ಬಿನ್ ಪುಟ್ಟಮಲ್ಲಪ್ಪ ಮತ್ತು ಮುನಿನಂಜಪ್ಪ ಬಿನ್ ಲಕ್ಷ್ಮಯ್ಯ, ‘ಕೋಡಿಮಂಚೇನಹಳ್ಳಿ ಸರ್ವೇ ನಂಬರ್ 5/ ಪಿ 5 ರಲ್ಲಿ 1.38 ಎಕರೆ, ಸ.ನಂ.5/ಪಿ 6ರಲ್ಲಿ 2.34 ಎಕರೆ ಜಮೀನು 45 ವರ್ಷಗಳ ಹಿಂದೆ ಸಾಗುವಳಿ ಹಕ್ಕುಪತ್ರ ನೀಡಲಾಗಿದೆ. ಅಂದಿನಿಂದ ಈವರೆಗೆ ಪಹಣಿ ಇದೆ. ಮ್ಯುಟೇಷನ್ ಇದೆ, ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಕಂದಾಯ ಇಲಾಖೆ ಏಕಾಏಕಿ ಸಾಗುವಳಿ ಜಮೀನಿನಲ್ಲಿ ರಸ್ತೆಗೆ ಅನುಮತಿ ನೀಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ನಮ್ಮ ಸಾಗುವಳಿಯ ಒಟ್ಟು ಜಮೀನಿನಲ್ಲಿ 14 ರಿಂದ 16 ಗುಂಟೆ ಜಮೀನು ರಸ್ತೆಗೆ ಬಳಕೆಯಾಗಲಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣ ಮಾಡಬಾರದು’ ಎಂದು ಒತ್ತಾಯಿಸಿದರು.