ದೊಡ್ಡಬಳ್ಳಾಪುರ:ಜೂನ್ನಲ್ಲಿ ನಡೆಯಲಿರುವ ಪರಿಸರ ಸಮ್ಮೇಳನದ ಅಂಗವಾಗಿ ನಗರದ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ಚಿತ್ರಕಲಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಅಮಲಿ ನಾಯಕ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಪರಿಸರದ ಬಗ್ಗೆ ಕಾಳಜಿ ವಹಿಸಿ ಅದಕ್ಕೆ ತಕ್ಕೆ ಏರ್ಪಾಡುಗಳನ್ನು ನಾವು ಇಂದಿನಿಂದಲೇ ಆರಂಭಿಸದಿದ್ದರೆ ಭವಿಷ್ಯ ಕರಾಳವಾಗಿರುತ್ತದೆ. ಹಣ ನೀಡಿದೂ ನಾವು ಶುದ್ಧ ನೀರು ಹಾಗೂ ಗಾಳಿ ಪಡೆಯಲಾಗದ ಸನ್ನಿವೇಶ ಬರುತ್ತದೆ. ಈ ದಿಸೆಯಲ್ಲಿ ಇಂದಿನ ಪೀಳಿಗೆಗೆ ಅರಿವು ಮೂಡಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಚಿತ್ರಕಲೆಯ ಕುರಿತು ತರಬೇತಿ ನೀಡಿದ ಆರ್ಟ್ ಗ್ರೂಪ್ನ ಶಿವಕುಮಾರ್, ‘ಈಗ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತಿರುವ ಸ್ಥಿತಿ ನಮ್ಮ ಕಣ್ಣ ಮುಂದಿದೆ. ಇಂತಹ ಚಿತ್ರಣವನ್ನು ನಾವು ಇಂದಿನ ಪೀಳಿಗೆಗೆ ತಿಳಿಸಬೇಕಿದೆ’ ಎಂದರು.
ಪರಿಸರದ ಕುರಿತು ಚರ್ಚೆಗಳ ಮೂಲಕ ಹಾಗೂ ಚಿತ್ರಕಲೆಯ ಮಾದರಿ ಉದಾಹರಣೆಗಳನ್ನು ನೀಡಿ ಸಮಾಜದ ಬದಲಾವಣೆಯಲ್ಲಿ ಚಿತ್ರಕಲೆಯ ಪಾತ್ರವನ್ನುಶಿವಕುಮಾರ್ ವಿವರಿಸಿದರು.
ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ ಪರಿಸರ ಸಮ್ಮೇಳನ ಹಾಗೂ ಕಾರ್ಯಾಗಾರ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಪರಿಸರದ ಕುರಿತಾದ ಕಥೆಯಲ್ಲಿ ಸಮಸ್ಯೆ, ಪ್ರತಿಕ್ರಿಯೆ, ಕ್ರಿಯೆ ಮತ್ತು ಸಮಸ್ಯೆ ಬಗೆಹರಿಸುವುದಕ್ಕೆ ನಾಲ್ಕು ವಿಧಾನಗಳನ್ನು ಒಳಗೊಂಡ ಪೋಸ್ಟರ್ಗಳನ್ನು ಶಿಬಿರಾರ್ಥಿಗಳು ರಚಿಸಲು ತರಬೇತಿ ನೀಡಲಾಯಿತು.