ವಿಜಯಪುರ: ಈಜುವ ಕಲೆಯಿಂದ ಶಾರೀರಿಕ ಸದೃಢತೆ ಹೊಂದುವುದರ ಜೊತೆಗೆ ಮಾನಸಿಕವಾಗಿ ಹೆಚ್ಚು ಸದೃಢವಾಗಲಿಕ್ಕೂ ಸಹಕಾರಿಯಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣಗೌಡ ಹೇಳಿದರು.
ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿ ನಳಂದಾ ವಿದ್ಯಾಸಂಸ್ಥೆ ಆವರಣದಲ್ಲಿ ನಿರ್ಮಾಣ ಮಾಡಿರುವ ಈಜುಕೊಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಜುವ ಸ್ಪರ್ಧೇ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವುದರಿಂದ ಶಾಲಾ ಹಂತದಲ್ಲೇ ಈಜುಕೊಳಗಳನ್ನು ನಿರ್ಮಾಣ ಮಾಡಿ, ಮಕ್ಕಳನ್ನು ತರಬೇತಿಗೊಳಿಸುವುದು ಉತ್ತಮವಾದ ಬೆಳವಣಿಗೆಯಾಗಲಿದೆ. ವಿದ್ಯಾರ್ಥಿಗಳಾಗಿದ್ದಾಗಲೇ ಈಜು ಕಲಿಯುವುದರಿಂದ ಅಪಾಯದಲ್ಲಿರುವವರನ್ನು ಸಂರಕ್ಷಣೆ ಮಾಡಲೂ ಸಹಕಾರಿಯಾಗಲಿದೆ ಎಂದರು.
ಈಜು ಕೊಳ ಉದ್ಘಾಟನೆ ಮಾಡಿದ ಬೂದಿಗೆರೆ ಗಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ದೈಹಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಶಾಲೆಗಳಲ್ಲಿ ಈಜುಕೊಳಗಳನ್ನು ನಿರ್ಮಾಣ ಮಾಡಬೇಕು. ಅಲ್ಲದೆ ಉತ್ತಮ ತರಬೇತಿದಾರರನ್ನು ನೇಮಕ ಮಾಡುವುದರ ಜತೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಲೋಕೇಶ್ ಮಾತನಾಡಿ, ದೇಹದ ಸಂಪೂರ್ಣ ಆರೋಗ್ಯ ವೃದ್ಧಿಗೆ ಈಜು ಒಂದು ಪ್ರಮುಖ ಕ್ರೀಡೆಯಾಗಿದ್ದು ದೇಶದಲ್ಲಿ ಕ್ರಿಕೆಟ್ಗೆ ನೀಡಿದಂತೆ ಈಜಿಗೂ ಉತ್ತಮ ಪ್ರಾಶಸ್ತ್ಯ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಜು ಕ್ರೀಡೆಯನ್ನು ಹೆಚ್ಚು ಪ್ರಚಾರಗೊಳಿಸಲು ಶಾಲೆಯ ಆಡಳಿತದ ವತಿಯಿಂದ ಸ್ಪರ್ಧೆ ಹಾಗೂ ಅನೇಕ ಚಟುವಟಿಕೆಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು.
ವಿ.ಎಸ್.ಎಸ್.ಎನ್ ಅಧ್ಯಕ್ಷ ಶಂಕರಪ್ಪ, ಗಂಗವಾರ-ಚೌಡಪ್ಪನಹಳ್ಳಿ ಗಾಮ ಪಂಚಾಯಿತಿ ಸದಸ್ಯೆ ಪ್ರೇಮಾ ರಾಮಸ್ವಾಮಿ, ಎಸ್.ಗಾಯಿತ್ರಿ ತಿಮ್ಮರಾಯಪ್ಪ, ಗಂಗವಾರ-ಚೌಡಪ್ಪನಹಳ್ಳಿ ನಾರಾಯಣಮ್ಮ ಮಂಜುನಾಥ್, ಎಂ.ರಾಜಣ್ಣ, ಸರಸ್ವತಿ ರಾಮಚಂದ್ರ, ವಕೀಲ ಮಹೇಶ್ ದಾಸ್, ಪ್ರಾಂಶುಪಾಲ ಮೇರಿ ಸೇಲ್ವಿ ಇದ್ದರು.