ವಿಜಯಪುರ: ಕೇಳಿ ಕಲಿಯುವ ಶಿಕ್ಷಣಕಿಂತ ನೋಡಿ ಕಲಿಯುವ ಶಿಕ್ಷಣ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯಬಲ್ಲದು ಎಂದು ರೂಬಿ ಆಂಗ್ಲಶಾಲೆಯ ಕಾರ್ಯದರ್ಶಿ ಸೈಯದ್ ರಫೀಕ್ ಹೇಳಿದರು.
ಇಲ್ಲಿನ ರೂಬಿ ಆಂಗ್ಲಶಾಲೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಪ್ಲಾನೆಟೋರಿಯಂನಲ್ಲಿ ಸೌರಮಂಡಲ ವೀಕ್ಷಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ವಿಜ್ಞಾನವು ಅತ್ಯವಶ್ಯಕ. ಇಂದಿನ ವಿಜ್ಞಾನವು ನಾಳಿನ ತಂತ್ರಜ್ಞಾನಕ್ಕೆ ನಾಂದಿಯಾಗಲಿದ್ದು, ನಾಳಿನ ತಂತ್ರಜ್ಞಾನವು ಇಂದಿನ ವಿಜ್ಞಾನದ ತಳಹದಿಯ ಮೇಲೆ ನಿಂತಿರುವುದರಿಂದ ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ಸಂಶೋಧನೆಗಳಿಗೆ ಹೆಚ್ಚಿನ ಮಹತ್ವ ನೀಡುವುದು ಅತ್ಯವಶ್ಯಕ.
‘ವಿಜ್ಞಾನ ದೈನಂದಿನ ಜೀವನದ ಭಾಗವಾಗಿದ್ದು, ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ನಮಗೆ ಅನೇಕ ಸೌಕರ್ಯಗಳು ದೊರಕುವಂತೆ ಮಾಡಿ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸಿವೆ. ಆದಕಾರಣ ಇಂದಿನ ಜ್ಞಾನ ಪ್ರಧಾನ ಸಮಾಜದಲ್ಲಿ ವೈಜ್ಞಾನಿಕ ಸಂಶೋಧನೆಗಳು ಮತ್ತು ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾಗಿದೆ’ ಎಂದರು.
‘ಪ್ಲಾನೆಟೋರಿಯಂನಲ್ಲಿ ಭೂಮಿಯ ಚಲನೆ, ಸೂರ್ಯ, ಚಂದ್ರ, ನಕ್ಷತ್ರಗಳು, ಸೌರಮಂಡಲ, ಆಕಾಶಕಾಯಗಳು, ಸೂರ್ಯಗ್ರಹಣ, ಚಂದ್ರಗ್ರಹಣಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಗುತ್ತಿದೆ. ತಾರಾಲಯ ವೀಕ್ಷಣೆ ವಿದ್ಯಾರ್ಥಿಗಳಿಗೆ ನೈಜ ಅನುಭವ ನೀಡುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಲು ಉತ್ತೇಜನ ನೀಡುತ್ತದೆ. ತಾರಾಲಯ ವೀಕ್ಷಣೆಯಿಂದ ಗ್ರಹಗಳು, ನಕ್ಷತ್ರಗಳ ವೀಕ್ಷಣೆ, ವಿಜ್ಞಾನ ಮತ್ತು ಬಾಹ್ಯಕಾಶ ಅಧ್ಯಯನಕ್ಕೆ ಇದು ಉತ್ತೇಜನ ನೀಡಲಿದೆ. ಜತೆಗೆ ಸೃಜನಶೀಲತೆಗೆ ಅವಕಾಶ ಕಲ್ಪಿಸಲಿದೆ. ಸೌರಮಂಡಲದ ರಚನೆ, ಪ್ರಭಾವಲಯ ಲಕ್ಷಣದ ಪರಿಚಯ ಮಾಡಿಕೊಡುತ್ತದೆ’ ಎಂದರು.
ಮುಖ್ಯಶಿಕ್ಷಕಿ ನಿಖತ್ಸಲ್ಮಾ ಮಾತನಾಡಿ, ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅವಶ್ಯವಾಗಿರುವ ಎಲ್ಲಾ ರೀತಿಯ ಶಿಕ್ಷಣ ಕೊಡುವ ಮೂಲಕ ಮಕ್ಕಳಲ್ಲಿನ ಗೊಂದಲಗಳನ್ನು ನಿವಾರಣೆ ಮಾಡುವ ಕಡೆಗೆ ಚಿಂತನೆ ನಡೆಸಿದ್ದೇವೆ. ಕಲಿಕೆಗೆ ಅಂತ್ಯವಿಲ್ಲ. ಎಷ್ಟೇ ಕಲಿತರೂ ಹೊಸ ಹೊಸ ವಿಚಾರಗಳು ಆವಿಷ್ಕಾರಗೊಳ್ಳುತ್ತಿರುತ್ತವೆ. ಮಕ್ಕಳ ಕಲಿಕೆಗೆ ಪೂರಕವಾಗಿ ಪೋಷಕರೂ ಕೂಡಾ ಸ್ಪಂದನೆ ನೀಡಿದಾಗ ನಾವು ಮಕ್ಕಳನ್ನು ಉತ್ತಮ ಪೌರರನ್ನಾಗಿ ರೂಪಿಸಲಿಕ್ಕೆ ಸಾಧ್ಯವಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.