ಹೊಸಕೋಟೆ: ಸ್ಥಳೀಯವಾಗಿ ದೊರೆಯುವ ಪೋಷಕಾಂಶಯುಕ್ತ ಸೊಪ್ಪು ತರಕಾರಿಗಳನ್ನು ಮನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಮಕ್ಕಳು ಮತ್ತು ಗರ್ಭಿಣಿಯರ ಅಪೌಷ್ಟಿಕತೆಯನ್ನು ನಿವಾರಣೆ ಮಾಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿ ಓರೋಹಳ್ಳಿ ಗ್ರಾಮದಲ್ಲಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಹಾಗು ಆಶಾ ಕಿರಣ ಯೋಜನೆ ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ವಿ.ಸಿ. ಜಯದೇವಯ್ಯ ಮಾತನಾಡಿ, ಅಲಂಕಾರಕ್ಕಾಗಿ ಮನೆಯ ಸುತ್ತ ಯಾವುದೋ ಗಿಡ ಬೆಳೆಸುವ ಬದಲು, ಸಣ್ಣ ಪುಟ್ಟ ತರಕಾರಿ ಮತ್ತು ಪೌಷ್ಟಿಕಾಂಶಯುಕ್ತ ಸೊಪ್ಪುಗಳನ್ನು ಮನೆಯ ಕೈತೋಟದಲ್ಲಿ ಬೆಳೆಸುವ ಹವ್ಯಾಸವನ್ನು ಜನರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಶಾ ಕಾರ್ಯಕರ್ತೆ ಮಹದೇವಿ, ಶಿಶು ತಜ್ಞೆ ಡಾ. ಗೌತಮಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಸಿಡಿಪಿಒ ಗಳಾದ ನಾಗೇಶ್, ವಿದ್ಯಾ, ಅಂಗನವಾಡಿ ಮೇಲ್ವಿಚಾರಕಿ ಸರೋಜಮ್ಮ, ಪುಷ್ಪ ಇದ್ದರು.