ಈ ಬಗ್ಗೆ ಮಾಹಿತಿ ನೀಡಿದ ನೇಕಾರರ ಹಿತರಕ್ಷಣಾ ಸಮಿತಿ ಮುಖಂಡ ಪಿ.ಎ.ವೆಂಕಟೇಶ್, ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಯಾವುದೇ ಸಭೆ, ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಇದೆ. ಆದರೆ, ನೇಕಾರರ ಕಷ್ಟಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಮೊದಲುಗೊಂಡು ಆಡಳಿತ, ವಿರೋಧ ಪಕ್ಷದ ಎಲ್ಲಾ ಮುಖಂಡರು, ಅಧಿಕಾರಿಗಳವರೆಗೆ ಮನವಿ ಸಲ್ಲಿಸಿ ಬೇಸತ್ತು ಹೋಗಿದ್ದೇವೆ. ಮನೆಗಳಲ್ಲಿಯೇ ಒಂದೆರಡು ಮಗ್ಗಗಳನ್ನು ಹಾಕಿಕೊಂಡು ಬಟ್ಟೆ ನೇಯ್ದು ಜೀವನ ನಡೆಸುತ್ತಿರುವ ನೇಕಾರರು ಒಂದು ತಿಂಗಳಿಂದ ಕೆಲಸ ಇಲ್ಲದೆ ಬರಿಗೈಯಾಗಿದ್ದಾರೆ. ಆದರೆ, ಸರ್ಕಾರ ಮಾತ್ರ ಇದುವರೆಗೂ ನೇಕಾರರು ಏನಾಗಿದ್ದೀರಿ ಎಂದು ಸೌಜನ್ಯಕ್ಕೂ ವಿಚಾರಿಸಿಲ್ಲ ಎಂದು ದೂರಿದರು.