ವಿಜಯಪುರ: ಕಲೆಯೆಂಬುದು ಪ್ರತಿಯೊಬ್ಬ ಮಾನವರಲ್ಲಿನ ಅಂತರಾತ್ಮವನ್ನು ಸನ್ಮಾರ್ಗದ ಕಡೆಗೆ ಒಯ್ಯುತ್ತದೆ ಎಂದು ಅರ್ಚನ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ಕಲಾವಿದ ಟಿ.ವೆಂಕಟೇಶ್ ತಿಳಿಸಿದರು.
ಹೋಬಳಿಯ ಗಡ್ಡದನಾಯಕನಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರ್ಚನ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಕಲೆಯನ್ನು ಬೆಳೆಸಿಕೊಳ್ಳುವುದು ಸೂಕ್ತ. ಶಿಕ್ಷಣದ ಜತೆಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಹಾಗೂ ಕಲೆಯ ಅವಶ್ಯಕತೆಯೂ ಇದು ಹಿರಿದಾಗಿದೆ ಎಂದರು.
‘ಕಲೆಯಲ್ಲಿ ಲಲಿತ ಕಲೆ, ಶಾಸ್ತ್ರೀಯ ಕಲೆ, ಜಾನಪದ ಕಲೆ, ಸಂಗೀತ, ನೃತ್ಯ, ನಾಟಕ ಹೀಗೆ ಹತ್ತು ಹಲವಾರು ರೀತಿಯ ಕಲೆಗಳನ್ನು ನಮ್ಮ ನಾಡಿನಲ್ಲಿ ನೋಡಬಹುದಾಗಿದೆ. ಇಂದು ಸಂಸ್ಕೃತಿ ನಶಿಸುತ್ತಿದೆ’ ಎಂದರು.
‘ನಮ್ಮಲ್ಲಿರುವ ಆಸಕ್ತಿಯ ಕೊರತೆಯೇ ಇದಕ್ಕೆ ಕಾರಣ. ಅದಕ್ಕಾಗಿ ನೈತಿಕತೆ ಮೌಲ್ಯವನ್ನು ನಾವು ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವ ಕಲೆಗೆ ವೇದಿಕೆ ಸಿಗುತ್ತಿಲ್ಲ. ಕಲೆಯನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು’ ಎಂದರು.
ಕಲೆ ಎನ್ನುವುದು ವರ್ಗ, ಸಮುದಾಯಕ್ಕೆ ಸೀಮಿತವಲ್ಲ. ಅದು ಎಲ್ಲರ ನಡುವೆ ಜೀವಂತವಿದೆ. ಕಲೆಯನ್ನು ಪ್ರದರ್ಶಿಸಲು ವೇದಿಕೆ ಸಿಗುತ್ತಿಲ್ಲ ಎಂಬ ಕೊರಗು ನಿವಾರಿಸಲು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಯುವಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸುಗಮ ಸಂಗೀತ, ಜನಪದ ಸಂಗೀತ ನಡೆಯಿತು. ಕಲಾವಿದರಾದ ನವೀನ್, ನಟರಾಜ್, ನಾಗರಾಜಪ್ಪ, ಕೇಶವಪ್ಪ, ಶಶಿಕುಮಾರ್, ಮಂಜುನಾಥ್ ಇದ್ದರು.