ವಿಜಯಪುರ: ಗಣರಾಜ್ಯೋತ್ಸವಕ್ಕೆ ಸಜ್ಜುಗೊಂಡಿದ್ದ ಮೈದಾನದಲ್ಲಿ ಸಂಭ್ರಮ ಮನೆ ಮಾಡಿತ್ತು. ಮಕ್ಕಳು ಭಾರತಮಾತೆ, ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.
ಇದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ 71 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಾವಳಿಗಳು.
ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ಗೌರವ ರಕ್ಷೆ ಸ್ವೀಕರಿಸಿದರು.
ಜಿ.ಕೆ.ಬಿ.ಎಂ.ಎಸ್.ಶಾಲೆ, ಭರತ್ ನಗರ ಸರ್ಕಾರಿ ಶಾಲೆ, ನಂದಿನಿ ವಿದ್ಯಾಸಂಸ್ಥೆ, ಹೆಣ್ಣು ಮಕ್ಕಳ ಮಾದರಿ ಶಾಲೆ, ರೂಬಿ ಆಂಗ್ಲ ಶಾಲೆ, ಸರ್ಕಾರಿ ಪ್ರೌಢಶಾಲೆ, ಹೆಣ್ಣು ಮಕ್ಕಳ ಪ್ರೌಢಶಾಲೆ, ಪ್ರಗತಿ ಪ್ರೌಢಶಾಲೆ, ವಿಜಯ ಶಾಲೆ, ಜೇಸಿಸ್ ವಿದ್ಯಾಸಂಸ್ಥೆ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಥಸಂಚಲನದದೊಂದಿಗೆ ಗಮನ ಸೆಳೆದರು.
ಪ್ರದೀಪ್ಕುಮಾರ್ ಮಾತನಾಡಿ, ‘ಸಂವಿಧಾನವು ಭಾರತೀಯರಿಗೆ ಸ್ವಾಭಿಮಾನದ ಬದುಕು ನೀಡಿದೆ. ಸಂವಿಧಾನ ಜಾರಿಯಾಗದಿದ್ದರೆ ದಕ್ಷ ಆಡಳಿತ ನೀಡಲು ಸಾಧ್ಯವಾಗುತ್ತಿರಲಿಲ್ಲ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯ, ದುರ್ಬಲ ವರ್ಗಗಳ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಏಳಿಗೆಗಾಗಿ ಸಂವಿಧಾನದಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಇಂತಹ ಅತ್ಯುತ್ತಮವಾದ ಸಂವಿಧಾನ ಹೊಂದಿರುವ ನಾವು ಅದರಡಿಯಲ್ಲಿ ಬದುಕುವ ಮೂಲಕ ಇತರರಿಗೂ ಸಂವಿಧಾನದ ಆಶಯಗಳನ್ನು ತಿಳಿಸಿಕೊಡಬೇಕಾಗಿದೆ’ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ವರ್ಗದ ಜನರಿಗೆ ಅಧಿಕಾರ ದೊರೆಯುತ್ತದೆ. ಪ್ರಜೆಗಳೇ ನೇರವಾಗಿ ಆಡಳಿತದಲ್ಲಿ ಭಾಗವಹಿಸಲು ಅನಕೂಲವಾಗಿದೆ. ಇದಕ್ಕೆ ಕಾರಣ ಡಾ.ಬಿ.ಆರ್. ಅಂಬೇಡ್ಕರ್. ದೇಶದ ರಕ್ಷಣೆ ಮಾಡುವ ಸೈನಿಕರು ಮತ್ತು ಅನ್ನ ನೀಡುವ ರೈತ ಬಂಧುಗಳಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು. ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದರು.
ಕಾಂಗ್ರೆಸ್ ಮುಖಂಡ ಆರ್.ಸಿ.ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಮುಖಂಡರಾದ ರಾಮುಭಗವಾನ್, ಕನಕರಾಜು, ಸಿ.ಬಸಪ್ಪ, ಪುರಸಭಾ ವ್ಯವಸ್ಥಾಪಕ ಆಂಜನೇಯುಲು, ಎಂಜಿನಿಯರುಗಳಾದ ಗಜೇಂದ್ರ, ಮಹೇಶ್ಕುಮಾರ್, ಸುಪ್ರಿಯಾ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.