ಚಿಂತಾಮಣಿ: ನಗರದಲ್ಲಿ ಹದಗೆಟ್ಟಿರುವ ಸಂಚಾರ ವ್ಯವಸ್ಥೆ ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಪದಾಧಿಕಾರಿಗಳು ಒತ್ತಾಯಿಸಿದರು.
ಮಂಗಳವಾರ ಡಿವೈಎಸ್ಪಿ ಎಸ್.ಟಿ. ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.
ನಗರದಲ್ಲಿ ವಾಹನಗಳು ಅಡ್ಡಾ ದಿಡ್ಡಿ ಸಂಚರಿಸುವುದು, ಎಲ್ಲೆಂದರಲ್ಲಿ ನಿಲ್ಲಿಸುವುದು, ಸಂಚಾರ ನಿಯಮ ಪಾಲಿಸದೆ ಸಂಚರಿಸುವುದು ಸಾಮಾನ್ಯವಾಗಿದೆ ಎಂದು ದೂರಿದರು.
ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದರಿಂದ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿವೆ. ಚೇಳೂರು ರಸ್ತೆ ಮತ್ತು ಕೋಲಾರ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡ ಪ್ರಕರಣಗಳು ನಡೆದಿದೆ. ಸಂಚಾರ ನಿಯಮ ಪಾಲಿಸಲು ಕಠಿಣ ಕ್ರಮ ಕೈಗೊಂಡು ಅಮಾಯಕರನ್ನು ತೊಂದರೆಯಿಂದ ದೂರ ಮಾಡಬೇಕು ಎಂದು ಮನವಿ ಮಾಡಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮನಗರ ಶಂಕರ್, ಯೂನಸ್ ಖಾನ್, ಇನಾಯತ್ ಉಲ್ಲಾ, ಆರ್. ಈಲಿಯಾಸ್ ಇದ್ದರು.