ವಿಜಯಪುರ: ‘ಕನ್ನಡ ಭಾಷೆಯನ್ನು ಉಳಿಸಬೇಕು, ಬೆಳೆಸಬೇಕು, ಬಳಸಬೇಕು ಎನ್ನುವ ಆಶಯವನ್ನು ಇಟ್ಟುಕೊಂಡು ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲಿ ಕನ್ನಡದ ಕಂಪು ಪಸರಿಸಬೇಕು’ ಎಂದು ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕನ್ನಡ ಆಂಜಿನಪ್ಪ ಹೇಳಿದರು.
ಮೈಸೂರು ಜಿಲ್ಲೆಯ ಇಲವಾಲ ಗ್ರಾಮದಲ್ಲಿ 98 ನೇ ‘ಕನ್ನಡ ಜ್ಯೋತಿ’ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕಗಳ ವಿತರಣೆ ಮಾಡಿ ಅವರು ಮಾತನಾಡಿದರು.
‘ಕನ್ನಡ ಭಾಷೆಗಿರುವಷ್ಟು ಹಿರಿಮೆ ಯಾವ ಭಾಷೆಗೂ ಇಲ್ಲ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಭಾಷೆಯಾಗಿದ್ದರೂ ಅನ್ಯಭಾಷೆಗಳ ಪ್ರಭಾವಕ್ಕೆ ಸಿಲುಕಿ ನಲುಗುತ್ತಿದೆ’ ಎಂದು ವಿಷಾದಿಸಿದರು.
‘ನವೆಂಬರ್ ತಿಂಗಳಲ್ಲಿ ಮಾತ್ರವೇ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಭಾಷೆಯ ಏಳಿಗೆ ಸಾಧ್ಯವಾಗುವುದಿಲ್ಲ. ಕನ್ನಡವನ್ನು ದಿನನಿತ್ಯ ಬಳಸಬೇಕು. ರಾಜ್ಯದಲ್ಲಿ ಆಡಳಿತ ಭಾಷೆಯಾಗಬೇಕು. ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಓದಿನ ಅಭಿರುಚಿ ಬೆಳೆಸಬೇಕಾಗಿದೆ’ ಎಂದು ಸಲಹೆ ನೀಡಿದರು.
ಇಲವಾಲ ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯಲಕ್ಷ್ಮಮ್ಮ, ಮುಖಂಡರಾದ ಸಿದ್ಧಪ್ಪ ನೇಗಿಲಾಲ, ವೆಂಕಟೇಶಮೂರ್ತಿ, ಚಲುವರಾಜು, ಸೌಮ್ಯಲತಾ, ರಾಜಶೇಖರ, ಶಂಕರಪ್ಪ, ಮಂಜುನಾಥ ಇದ್ದರು.