ದೇವನಹಳ್ಳಿ: ಐತಿಹಾಸಿಕ ಕೋಟೆ ಶ್ರೀವೇಣುಗೋಪಾಲ ಸ್ವಾಮಿಯ ರಥೋತ್ಸವ ಮೆರವಣಿಗೆ ಈ ಬಾರಿ ಇರುವುದಿಲ್ಲ. ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತ ಕಚೇರಿಯಲ್ಲಿ ರಥೋತ್ಸವ ಕುರಿತು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊವಿಡ್ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿದೆ. ಸರ್ಕಾರದ ನಿರ್ದೇಶನದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ಆದರೆ, ಮೆರವಣಿಗೆ ನಡೆಸಲು ಅವಕಾಶವಿಲ್ಲ. 50ಕ್ಕಿಂತ ಹೆಚ್ಚು ಭಕ್ತರು ಪಾಲ್ಗೊಳ್ಳುವಂತಿಲ್ಲ ಎಂದರು.
ರಥದ ಬಿಡಿಭಾಗಗಳನ್ನು ಜೋಡಿಸಿ ವಸ್ತ್ರಾಲಂಕಾರ ಮತ್ತು ಹೂವಿನಿಂದ ಅಲಂಕರಿಸಿ ಫೆ. 27ರಂದು ಸಾಂಕೇತಿಕವಾಗಿ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಲಾಗುವುದು. ಆಭರಣಗಳಿಂದ ಅಲಂಕರಿಸಿ ವಿಧಿವಿಧಾನ ಪೂರೈಸಲಾಗುತ್ತದೆ ಎಂದು ಹೇಳಿದರು.