ಆನೇಕಲ್: ತಾಲ್ಲೂಕಿನ ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 63 ರೌಡಿಶೀಟರ್ಗಳ ಮನೆಗಳ ಮೇಲೆ ಡಿವೈಎಸ್ಪಿ ಎಂ.ಮಲ್ಲೇಶ್ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಲಾಯಿತು.
ರೌಡಿಶೀಟರ್ಗಳ ಮನೆಗಳ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಪೊಲೀಸರು, ಮನೆಗಳನ್ನು ಶೋಧ ನಡೆಸಿ ಅವರ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಮಾರಕಾಸ್ತ್ರಗಳು, ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು.
ಆನೇಕಲ್ ತಾಲ್ಲೂಕಿನಿಂದ 63 ರೌಡಿಶೀಟರ್ಗಳನ್ನು ಬ್ಯಾಡರಹಳ್ಳಿಯ ಡಿಎಆರ್ ಮೈದಾನಕ್ಕೆ ಕರೆದೊಯ್ದು, ರೌಡಿಪರೇಡ್ ಮಾಡಿಸಲಾಯಿತು. ಪರೇಡ್ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವ್ಯಾಪ್ತಿಯ 190ಕ್ಕೂ ಹೆಚ್ಚು ರೌಡಿಶೀಟರ್ಗಳು ಭಾಗಿಯಾಗಿದ್ದರು ಎಂದು ಡಿವೈಎಸ್ಪಿ ಮಲ್ಲೇಶ್ ತಿಳಿಸಿದರು.
ತಾಲ್ಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬದ್ಧವಾಗಿದೆ. ಎಸ್ಪಿ ಡಾ.ಕೆ.ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರೌಡಿಗಳು ಧಮ್ಕಿ ಹಾಕುವುದು,ತಡೆಗೋಡೆ ನಿರ್ಮಿಸುವುದು,ದೌರ್ಜನ್ಯ ಪ್ರಕರಣಗಳಲ್ಲಿ ಕಂಡು ಬಂದಲ್ಲಿ ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ಗಳಾದ ಕೆ.ವಿಶ್ವನಾಥ್, ಮಹಾನಂದ್, ಜಗದೀಶ್, ರಾಘವೇಂದ್ರ ಇಮ್ರಾಪುರ್, ಸುದರ್ಶನ್ ಇದ್ದರು.