ದೇವನಹಳ್ಳಿ: ದೇಶ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಫುಲೆ ಜಯಂತಿಯನ್ನು ರಾಜ್ಯ ಸರ್ಕಾರ ಸಾರ್ವತ್ರಿಕ ದಿನಾಚರಣೆಯನ್ನಾಗಿ ಘೋಷಿಸಬೇಕೆಂದು ಪ್ರಜಾ ವಿಮೋಚನಾ ಚಳವಳಿ ಬಹುಜನ ಸಮಿತಿ ಸಂಸ್ಥಾಪಕ ರಾಜ್ಯ ಘಟಕದ ಅಧಕ್ಷ ಬಿಜ್ಜವಾರ ನಾಗರಾಜ್ ಒತ್ತಾಯಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರಜಾ ವಿಮೋಚನಾ ಬಹುಜನ ಸಮಿತಿ ವತಿಯಿಂದ ಸಾವಿತ್ರಿ ಬಾ ಫುಲೆ ಅವರ 188ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು.
1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕುಗ್ರಾಮದಲ್ಲಿ ಜನ್ಮ ತಾಳಿದ ಅವರು, 9ನೇ ವರ್ಷದಲ್ಲಿ 12 ವರ್ಷದ ಜ್ಯೋತಿರಾವ್ ಬಾ ಫುಲೆಯೊಂದಿಗೆ ಚಿಕ್ಕ ವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ನಂತರ ಅಕ್ಷರ ಜ್ಞಾನ ಹೊಂದಿದ್ದ ಜ್ಯೋತಿರಾವ್ ಬಾ ಫುಲೆ ಮನೆಯಲ್ಲಿಯೇ ಪತ್ನಿಗೆ ಶಿಕ್ಷಣ ನೀಡಿದರು. ಶಿಕ್ಷಣದ ಜ್ಞಾನ ಅರಿತ ಸಾವಿತ್ರಿ ಬಾ ಗ್ರಾಮದ ಮಹಿಳೆಯರನ್ನು ಒಟ್ಟುಗೂಡಿಸಿ ಅಕ್ಷರದ ಮಹತ್ವ ತಿಳಿಸಿ ಜಾಗೃತಿಗೊಳಿಸಿದ ಮಹಾನ್ ಸಾಧಕಿ ಎಂದು ಹೇಳಿದರು.
ಅಂದಿನ ಕಾಲಘಟ್ಟದಲ್ಲಿ ಹೆಚ್ಚಾಗಿ ಅಸ್ಪೃಶ್ಯತೆ ಸಮಾಜದಲ್ಲಿ ತಾಂಡವಾಡುತ್ತಿತ್ತು. ಆ ಸಂದರ್ಭದಲ್ಲಿ ಮೇಲ್ವರ್ಗದ ಜನರ ಕಿರುಕುಳ, ದೌರ್ಜನ್ಯ ಮೆಟ್ಟಿನಿಂತವರು. ಮಹಿಳೆಯರಿಗೆ, ವಿಧೆವೆಯರಿಗೆ ಮತ್ತು ದಲಿತರಿಗೆ 14 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಸಾವಿರಾರು ಮಹಿಳೆಯರಿಗೆ ಶಿಕ್ಷಣ ನೀಡಿದ ಅಕ್ಷರ ಕ್ರಾಂತಿಯ ರೂವಾರಿ. ಅಂದಿನ ಬ್ರಿಟಿಷ್ ಸರ್ಕಾರ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಪುರಸ್ಕಾರ ನೀಡಿ ಗೌರವಿಸಿದೆ. ಇಂತಹ ಮಹಾನ್ ಸಾಧಕಿ ಜನ್ಮ ದಿನಾಚರಣೆಯನ್ನು ಸರ್ಕಾರ ಪ್ರತಿ ವರ್ಷ ಜ.3ರಂದು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಆಚರಣೆ ಮಾಡಲು ಸರ್ಕಾರ ಘೋಷಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾ ವಿಮೋಚನಾ ಬಹುಜನ ಸಮಿತಿ ವಿವಿಧ ಘಟಕ ಪದಾಧಿಕಾರಿಗಳಾದ ಸಿಂಗ್ರಹಳ್ಳಿ ನರಸಿಂಹಯ್ಯ, ಚನ್ನಗಿರಿಯಪ್ಪ, ಕುಮಾರ್, ನಂಜೇಶ್, ಅನುಪಮಾ, ಅನ್ನಪೂರ್ಣ, ಶಿವಾನಂದ, ವೆಂಕಟೇಶ್, ಮುನಿಕೃಷ್ಣ, ಸಂತೋಷ್,ಮಧು ಇದ್ದರು.