ಹೊಸಕೋಟೆ: ‘ಶರತ್ ಬಚ್ಚೇಗೌಡ ಇನ್ನೂ ಚಿಕ್ಕಹುಡುಗ. ಅವರಿಗೆ ಅನುಭವದ ಕೊರತೆ ಇದೆ. ಅವರು ಆತುರದಿಂದ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಅವರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ ನಾಗರಾಜ್ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದರು.
‘ಶರತ್ ಬಚ್ಚೇಗೌಡರು ಆತುರದ ನಿರ್ಧಾರ ತೆಗೆದುಕೊಂಡು ಚುನಾವಣೆಗೆ ನಿಂತಿದ್ದು ಜನ ಅವರನ್ನು ಬೆಂಬಲಿಸುವುದಿಲ್ಲ, ಅವರು ಪಕ್ಷದ ಕಾರ್ಯಕರ್ತರಾಗಿ ಸಮಾಜದಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಅನುಭವ ಪಡೆಯಬೇಕಿತ್ತು’ ಎಂದು ಅಭಿಪ್ರಾಯ ಪಟ್ಟರು.
ಬಚ್ಚೇಗೌಡರ ಬಗ್ಗೆ ಮಾತನಾಡಿ, ‘ಅವರು ಪಕ್ಷದ ಸಂಸತ್ ಸದಸ್ಯರು. ಅವರು ಹಿರಿಯ ರಾಜಕಾರಣಿ. ಪುತ್ರ ವ್ಯಾಮೋಹವಿಲ್ಲದೆ ಬಂದು ಕೆಲಸ ಮಾಡುತ್ತಾರೆ’ ಎಂದರು.
ನಾಗರಾಜ್ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಅವರು ಯಾವುದೇ ಜಾತಿ, ಜನಾಂಗಕ್ಕೆ ನೋವು ಕೊಟ್ಟಿಲ್ಲ. ಆದ್ದರಿಂದ ಅವರನ್ನು ಇಲ್ಲಿಯ ಮತದಾರರು ಗೆಲ್ಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಗೆ ಓಟ್ ಬ್ಯಾಂಕ್ ಆಗಿದ್ದ ದೀನ ದಲಿತರು ಈಗ ಅವರಿಂದ ದೂರ ಹೋಗಿದ್ದು ಆ ಪಕ್ಷ ಅವಸಾನದ ಅಂಚಿನಲ್ಲಿದೆ’ ಎಂದರು.