ಆನೇಕಲ್:ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಗೆಸ್ಟ್ಲೈನ್ ಸರ್ಕಲ್ ಬಳಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸ್ಕೈವಾಕ್ ನಿರ್ಮಿಸಬೇಕು ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.
ಅವರು ತಾಲ್ಲೂಕಿನ ಯಡವನಹಳ್ಳಿ ಸಮೀಪ ಅಂಡರ್ಪಾಸ್ ಪರಿಶೀಲನೆ ನಡೆಸಿ ಮಾತನಾಡಿದರು.
ಗೆಸ್ಟ್ಲೈನ್ ಮತ್ತು ಅತ್ತಿಬೆಲೆ ನಡುವಿನ ಐದು ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆ. ಅಂಡರ್ಪಾಸ್ ನಿರ್ಮಾಣ ಮಾಡಿದ್ದರೂ ಮಳೆ ಬಂದರೆ ನೀರು ನಿಲ್ಲುತ್ತದೆ. ಸೂಕ್ತ ನಿರ್ವಹಣೆಯಿಲ್ಲ. ಸ್ವಚ್ಛತೆ ಕಾಪಾಡಬೇಕು. ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆಗಳು ಮತ್ತು ಮೂಲಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಪಘಾತ ತಡೆಯಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರ ಜೀವ ಮುಖ್ಯ ಎಂದರು.
ರಾಷ್ಟ್ರೀಯ ಹೆದ್ದಾರಿಯ ಎಲಿವೇಟೆಟ್ ಹೈವೇ ವಿಭಾಗದ ಅಧಿಕಾರಿ ಬಲದೇವ್ಸಿಂಗ್, ಮುಖಂಡರಾದ ರಘುಪತಿ ರೆಡ್ಡಿ, ವೆಂಕಟೇಶ್, ವೈ.ಜಿ. ರಘು ಹಾಜರಿದ್ದರು.