ಹೊಸಕೋಟೆ: ‘ನಿನಗೆ ನೀನೆ ನಿಜವಾದ ಮಿತ್ರ. ಸತ್ಕರ್ಮದಲ್ಲಿರುವ ಆತ್ಮವೇ ಮನುಷ್ಯನಿಗೆ ನಿಜವಾದ ಮಿತ್ರನಾಗಬೇಕು’ ಎಂದು ಜೈನ ಮುನಿ ಆಚಾರ್ಯ ಮಹಾಶ್ರವಣ್ ಅವರು ಹೇಳಿದರು.
ಅಹಿಂಸಾ ಪಾದಯಾತ್ರೆಯಲ್ಲಿ ಹೊಸಕೋಟೆಗೆ ಬಂದಿದ್ದ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
‘ಇತರರಿಗೆ ಹಿಂಸೆ ಮಾಡದೆ, ಯಾವ ಜೀವಿಗಳಿಗೂ ನೋವುಂಟು ಮಾಡದೆ ಇರುವಂತಹ ವ್ಯಕ್ತಿಯ ಆತ್ಮವೇ, ಆತನಿಗೆ ಉತ್ತಮ ಗೆಳೆಯ. ಯಾರು ತನ್ನ ಆತ್ಮದೊಂದಿಗೆ ಉತ್ತಮ ಗೆಳೆತನ ಹೊಂದಿರುತ್ತಾರೋ ಅವರು ಮಾತ್ರ ಹೊರಗಿನ ವ್ಯಕ್ತಿಗಳೊಂದಿಗೆ ಉತ್ತಮ ಸ್ನೇಹ ಸಂಪಾದಿಸುತ್ತಾರೆ’ ಎಂದರು.
‘ತೀರ್ಥಂಕರರು ಜ್ಞಾನಿಗಳು. ನಮಗೆ ದಿನಾಂಕಕ್ಕಿಂತ ಪಂಚಾಂಗದ ತಿಥಿ ಮುಖ್ಯ. ಅದರ ಪ್ರಕಾರ ಇಂದು ಆಚಾರ್ಯ ಮಹಾಪ್ರಜ್ಞರ ಜನ್ಮದಿನ. ಅವರು ಒಂದು ಬೀಜದಂತೆ; ಅದರಿಂದ ಹುಟ್ಟಿದ ವಟವೃಕ್ಷದ ಅಡಿಯಲ್ಲಿ ನಾವು ಇದ್ದೇವೆ. ಅವರ ನೆರಳಿನಲ್ಲಿ ವಿರಮಿಸುತ್ತಿದ್ದೇವೆ’ ಎಂದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.