ದೇವನಹಳ್ಳಿ: ‘ಒತ್ತಡದ ಜೀವನಶೈಲಿಯ ಪರಿಣಾಮ ಜರ್ಜರಿತರಾಗಿರುವ ಮನಸ್ಸುಗಳ ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯವಾಗಿದೆ’ ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ವಿ. ಶಾಂತಕುಮಾರ್ ತಿಳಿಸಿದರು.
ತಾಲ್ಲೂಕಿನ ಬೀರಸಂದ್ರ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯದ ನಿರ್ಮಾಣಕ್ಕೆ ಗುರುವಾರ ಧನಸಹಾಯ ನೀಡಿ ಅವರು ಮಾತನಾಡಿದರು.
ಭಕ್ತಿಭಾವ, ನಂಬಿಕೆ ಮೌಢ್ಯವಲ್ಲ. ಜ್ಞಾನ, ಪೂಜೆ, ಭಜನೆ ಮಾತ್ರವಲ್ಲದೆ, ಕಾಯಕ ದಾಸೋಹ ಭಾವವು ದೇವಾಲಯದ ಮೂಲಕ ಲಭಿಸುತ್ತದೆ. ದೇವಾಲಯಗಳು ಸಂಸ್ಕಾರ ನೀಡುವ ತಾಣಗಳಾಗಿವೆ ಎಂದರು.
ಗ್ರಾಮಗಳಲ್ಲಿ ಜನರು ಒಗ್ಗಟ್ಟು ಕಾಪಾಡಿಕೊಂಡು ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸುವಂತಾಗಬೇಕು. ಗ್ರಾಮೀಣ ಭಾಗದಲ್ಲಿ ಸಾಮರಸ್ಯ ಹೆಚ್ಚಲು ದೇವಾಲಯಗಳ ಪಾತ್ರ ಹೆಚ್ಚಿದೆ. ಪ್ರತಿ ಹಬ್ಬಗಳಲ್ಲಿ ಸಾಂಪ್ರಾದಾಯಿಕವಾಗಿ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಡೆಯಲಿವೆ. ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಬೇಕಾದರೆ ದೇವಾಲಯಗಳಿಗೆ ಜನರು ಮೊರೆ ಹೋಗುತ್ತಾರೆ ಎಂದರು.
ಮುಖಂಡರಾದ ಮದ್ದೂರಪ್ಪ, ರಾಜಣ್ಣ ಹಾಗೂ ಗ್ರಾಮಸ್ಥರು ಇದ್ದರು.