ಹೊಸಕೋಟೆ: ‘ತಾಲ್ಲೂಕಿನ ಜನತೆ ನಮಗೆ ವಿಧಾನಸಭೆಯ ಉಪಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸದಿದ್ದರೂ, ಆನಂತರ ನಡೆದ ಎರಡೂ ಚುನಾವಣೆಗಳಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ, ನನ್ನ ರಾಜಕೀಯ ಶಕ್ತಿ ಹೆಚ್ಚಿಸಿದ್ದಾರೆ’ ಎಂದು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ತಿಳಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಟೌನ್ ಕೋ ಆಪರೇಟೀವ್ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಬ್ಬ ವ್ಯಕ್ತಿಯ ನಾಯಕತ್ವದಲ್ಲಿ ಮೂರು ಬಾರಿ ಅಧಿಕಾರ ದೊರೆತಿದೆ ಎಂದರೆ, ನಮ್ಮ ಕೆಲಸಗಳನ್ನು ಜನ ಮೆಚ್ಚಿದ್ದಾರೆ ಎಂದು ತಿಳಿಯಬೇಕು. ನಗರದ ಅಭಿವೃದ್ಧಿಗಾಗಿ ಮುಂದಿನ ನಾಲ್ಕು ತಿಂಗಳಿನಲ್ಲಿ ₹ 18 ಕೋಟಿ ಹಣ ಬಿಡುಗಡೆಯಾಗಲಿದ್ದು, ನಗರವನ್ನು ಉತ್ತಮವಾಗಿಸಲು ಶ್ರಮಿಸಲಾಗುವುದು’ ಎಂದು ಹೇಳಿದರು.
‘ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಚುನಾವಣೆಯಲ್ಲಿ ಸೀಟು ಸಿಗದಿರಬಹುದು. ಅಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ’ ಎಂದರು.
‘ಚುನಾಯಿತ ಪ್ರತಿನಿಧಿಗಳು ಮತದಾರರಿಗೆ ನಿತ್ಯ ಲಭ್ಯವಿರಬೇಕು. ಅವರ ಸಮಸ್ಯೆಗಳಿಗೆ ಸದಾಕಾಲ ಸ್ಪಂದಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಆಯ್ಕೆಯಾಗಲು ಸಾದ್ಯ’ ಎಂದರು.
ನಗರ ಘಟಕದ ಅಧ್ಯಕ್ಷ ಸಿ.ಜಯರಾಜ್, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್, ನಗರಸಭೆ ಸದಸ್ಯರಾದ ರಾಮಾಂಜಿನಿ, ದೇವರಾಜ್, ಪಕ್ಷದ ಇತರ ನಾಯಕರು ಇದ್ದರು.