ತೂಬಗೆರೆ(ದೊಡ್ಡಬಳ್ಳಾಪುರ): ‘ನಮ್ಮ ಶಾಲಾ ಆವರಣದಲ್ಲಿ ಆಟವಾಡಲು ಸಾಧ್ಯವಾಗದಷ್ಟು ಮದ್ಯದ ಬಾಟಲಿಗಳನ್ನು ಹಾಕಲಾಗಿದೆ. ಇಡೀ ಶಾಲಾ ಆವರಣಕ್ಕೆ ತಡೆಗೋಡೆ ಇಲ್ಲದೇ ಇರುವುದರಿಂದ ಎಮ್ಮೆ, ದನ ಬರುತ್ತಿವೆ ಇದಕ್ಕೆಲ್ಲ ಕಡಿವಾಣ ಹಾಕಿ...’
ಇದು ತೂಬಗೆರೆ ಗ್ರಾಮ ಪಂಚಾಯಿತಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ಮುಂದೆ ತೆರೆದಿಟ್ಟ ದೂರುಗಳ ಪಟ್ಟಿ.
ತರಗತಿಯಲ್ಲಿ ಕುಳಿತು ಪಾಠ ಕೇಳಲು, ಪರೀಕ್ಷೆ ಬರೆಯಲು ಬೆಂಚುಗಳು ಇಲ್ಲದೆ ನೆಲದಲ್ಲಿಯೇ ಕುಳಿತು ಸಮವಸ್ತ್ರ ಕೊಳೆಯಾಗುತ್ತಿವೆ. ಕುಳಿತುಕೊಳ್ಳಲು ಡೆಸ್ಕ್ ಕೊಡಿಸಿ. ಶಾಲೆಯಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರು ಇಲ್ಲ. ನಮ್ಮ ಶಾಲೆಯಲ್ಲಿ ಕುಡಿಯುವ ನೀರು ಇಲ್ಲದೆ ತುಂಬಾ ಕಷ್ಟವಾಗಿದೆ ಎಂದು ವಿದ್ಯಾರ್ಥಿಗಳು ಸದಸ್ಯರ ಗಮನಕ್ಕೆ ತಂದರು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೇಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಮಕ್ಕಳ ಸಮಸ್ಯೆಗಳನ್ನು ಶೀಘ್ರವಾಗಿ ಪಂಚಾಯಿತಿ ಕ್ರಿಯಾಯೋಜನೆಗೆ ಸೇರಿಸಿ ಬಗೆ ಹರಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ಬಾಬು, ಸದಸ್ಯರಾದ ರಾಮಕೃಷ್ಣ, ರಾಜಕುಮಾರ್, ಶಿವಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್, ನೋಡಲ್ ಅಧಿಕಾರಿ ಮೂರ್ತಿ, ಎಸ್ಡಿಎಂಸಿ ಅಧ್ಯಕ್ಷೆ ಅಂಬಿಕಾ, ಸದಸ್ಯರಾದ ದೇವರಾಜ್, ಮುಖ್ಯಶಿಕ್ಷಕ ಗಿರೀಶ್ ಇದ್ದರು.