ಆನೇಕಲ್: ‘ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ಒತ್ತಡದ ಬದುಕಿನಲ್ಲಿ ಧ್ಯಾನ, ಪ್ರಾರ್ಥನೆಗೆ ಹೆಚ್ಚಿನ ಸಮಯವನ್ನು ಮೀಸಲಿಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು’ ಎಂದು ಬಿಬಿಎಂಪಿ ಮಾಜಿ ಸದಸ್ಯೆ ಕವಿತಾ ಬಾಬುರಾಜ್ ತಿಳಿಸಿದರು.
ತಾಲ್ಲೂಕಿನ ಹಾರಗದ್ದೆ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ಪ್ರತಿಷ್ಠಾಪನಾ ಪಂಚಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ರಾಜರಾಜೇಶ್ವರಿ ಅಮ್ಮನವರ ಆರಾಧನೆಯಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ. ದಕ್ಷಿಣ ಕನ್ನಡದ ಶೈಲಿಯಲ್ಲಿ ದೇವಾಲಯವನ್ನು ಐದು ವರ್ಷಗಳ ಹಿಂದೆ ನಿರ್ಮಿಸಿ ಈ ಭಾಗದ ಜನತೆಗೆ ದೇವರ ಪೂಜೆ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಸಹಸ್ರಾರು ಭಕ್ತರಿಗೆ ಆರಾಧ್ಯ ದೈವವಾಗಿದೆ ಎಂದರು.
ದೇವಾಲಯದ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಗಂಗಾಪೂಜೆ, ಗಣಪತಿ ಪೂಜೆ, ಸ್ವಸ್ಥಿ ವಾಚನ, ರಕ್ಷಾ ಬಂಧನ, ಪ್ರದಾನ ಕಳಶ ಸ್ಥಾಪನೆ, ಅಗ್ನಿ ಪ್ರತಿಷ್ಠಾಪನೆ, ಗಣ ಹೋಮ, ಅಷ್ಠದಿಕ್ಪಾಲಕ ಹೋಮ, ನವಗ್ರಹ ಹೋಮಗಳನ್ನು ನಡೆಸಲಾಯಿತು.
ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮವನ್ನು ವಿದ್ವಾನ್ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಗ್ರಾಮ ಹಾಗೂ ಸುತ್ತಲಿನ ಭಾಗದ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಮದ ರಾಜರಾಜೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದಲ್ಲಿ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್. ಬಸವರಾಜು, ಸದಸ್ಯ ವೆಂಕಟೇಶ್ಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಟಿ.ಎಸ್. ಉಮಾದೇವಿ, ಮುಖಂಡರಾದ ಬಾಬುರಾಜ್, ಕೆ.ಎಸ್. ನಟರಾಜ್, ಎಚ್.ಎಸ್. ನಂಜಣ್ಣ, ಕೇಶವ, ಚಂದ್ರಣ್ಣ, ಶ್ರೀಧರ್, ಶಾಂತರಾಮ್, ನಾಗಭೂಷಣ್ ಹಾಜರಿದ್ದರು.