ಹೊಸಕೋಟೆ: ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಗೊಳಿಸಲು ಪ್ರತಿ ದಿನ ತಾಲ್ಲೂಕಿನ ಗ್ರಾಮೀಣ ಪ್ರದೇಶ ಹಾಗೂ ನಗರಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸುವುದು ಮತ್ತು ದಂಡ ಹಾಕುವುದು. ಹೋಟಲ್, ಬೇಕರಿ, ಕಿರಾಣಿ ಅಂಗಡಿಗಳು ಮತ್ತು ಹೂವು, ಹಣ್ಣುಗಳನ್ನು ಮಾರುವವರಿಗೆ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡುವಂತೆ ಸೂಚಿಸಲಾಗಿದೆ ಎಂದರು.
ಸೋಮವಾರ ನಗರದಲ್ಲಿ ಶಾಸಕರ ನೇತೃತ್ವದಲ್ಲಿ ತಾಲ್ಲೂಕಿನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ ಜಾಗೃತಿ ಮೂಡಿಸುವುದು ಮತ್ತು ದಂಡ ವಿಧಿಸುವ ಕೆಲಸವನ್ನು ಮಾಡಿದರು.
ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು, ಆತಂಕ ಮೂಡಿಸಿದೆ. ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಜಾಗೃತಿ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ತಹಶೀಲ್ದಾರ್ ಗೀತಾ, ಡಿವೈಎಸ್ಪಿ ಉಮಾಶಂಕರ್, ಪೊಲೀಸ್ ಉಪ ನಿರೀಕ್ಷಕ ರಾಜು, ಕಂದಾಯಾಧಿಕಾರಿ ಮಲ್ಲಿಕಾರ್ಜುನ್, ಗ್ರಾಮ ಲಕ್ಕಿಗ ರವಿ ಹಾಜರಿದ್ದರು.