ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿಬಿ, ಗಸ್ತಿಯ ಸೇವೆ ಸ್ಮರಣೆ

ದೊಡ್ಡಬಳ್ಳಾಪುರದ ಸವಿತಾ ಸಮಾಜದಿಂದ ನುಡಿನಮನ ಕಾರ್ಯಕ್ರಮ
Last Updated 16 ಅಕ್ಟೋಬರ್ 2020, 3:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಇತ್ತೀಚೆಗೆ ನಿಧನರಾದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ರಾಜ್ಯಸಭಾ ಸದಸ್ಯ ಅಶೋಕ್‍ ಗಸ್ತಿ ಅವರಿಗೆ ಸವಿತಾ ಸಮಾಜದ ತಾಲ್ಲೂಕು ಸಂಘಟನೆದಿಂದ ಕನ್ನಡ ಜಾಗೃತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಲಾಯಿತು.

ಇದೇ ವೇಳೆ ಸವಿತಾ ಸಮಾಜದ ಮಾಜಿ ಕಾರ್ಯದರ್ಶಿ ಚಿನ್ನಪ್ಪ, ನಿರ್ದೇಶಕರಾದ ಧ್ರುವನಾರಾಯಣ್ ಮತ್ತು ನರೇಶ್ ಅವರ ನಿಧನಕ್ಕೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಟಿ.ಜಿ. ಮಂಜುನಾಥ್ ಮಾತನಾಡಿ, ‘ಸಾಮಾನ್ಯ ಕುಟುಂಬದಲ್ಲಿ ಜನಿಸಿ ಜನಪರವಾಗಿ ಬೆಳೆದ ಅಶೋಕ್‍ ಗಸ್ತಿ ಅವರ ಸಾಮಾಜಿಕ ಬದುಕು ವಿಶಿಷ್ಟವಾದುದು. ಅವರದ್ದು ಪಾರದರ್ಶಕ ಮತ್ತು ಸರಳ ವ್ಯಕ್ತಿತ್ವ. ಇಂತಹ ವ್ಯಕ್ತಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಕ್ರಮ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಶ್ಲಾಘನೀಯವಾದುದು. ಗಸ್ತಿ ಅವರ ಸೇವೆ ದೇಶಕ್ಕೆ, ಕನ್ನಡ ನಾಡಿಗೆ ಇನ್ನೂ ದೊರೆಯಬೇಕಿತ್ತು’ ಎಂದರು.

ಸ್ವರ ಮಾಂತ್ರಿಕ ಬಾಲಸುಬ್ರಹ್ಮಣ್ಯಂ ಮುಂದಿನ ಜನ್ಮವೊಂದು ಇದ್ದರೆ ಕನ್ನಡ ನಾಡಿನಲ್ಲೇ ಜನಿಸುತ್ತೇನೆ ಎಂದು ಹಲವಾರು ಕಾರ್ಯಕ್ರಮಗಳಲ್ಲಿ ಹೇಳಿದ್ದರು. 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ. ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಕಲಾಪ್ರೌಢಿಮೆಯನ್ನೂ ಪ್ರದರ್ಶಿಸಿದ್ದಾರೆ ಎಂದು ಸ್ಮರಿಸಿದರು.

ಕನ್ನಡ ಜಾಗೃತ ಪರಿಷತ್‌ ಕಾರ್ಯದರ್ಶಿ ತ.ನ. ಪ್ರಭುದೇವ್ ಮಾತನಾಡಿ, ಎಸ್‍ಪಿಬಿ ಅವರಿಗೆ ಕನ್ನಡದ ಬಗ್ಗೆ ಇದ್ದ ಕಾಳಜಿ ಅನನ್ಯವಾದುದು. ಪ್ರತಿಯೊಬ್ಬ ನಟರ ಧ್ವನಿಗೆ ತಕ್ಕಂತೆ ಹಾಡುತ್ತಿದ್ದುದು ಅವರ ಹೆಗ್ಗಳಿಕೆ ಎಂದರು.

ವಹ್ನಿಕುಲಕ್ಷತ್ರಿಯ ಸಂಘದ ರಂಗಸ್ವಾಮಿ, ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸವಿತಾ ಸಮಾಜದ ಕಾರ್ಯದರ್ಶಿ ಎಂ. ಕೃಷ್ಣಮೂರ್ತಿ, ನರಸಿಂಹಮೂರ್ತಿ, ಜಯರಾಮ್, ಗೌರವಾಧ್ಯಕ್ಷ ವೆಂಕಟರಾಜಪ್ಪ, ಉಪಾಧ್ಯಕ್ಷ ಹನುಮಂತದಾಸ್, ಖಜಾಂಚಿ ನರಸಿಂಹರಾಜು, ಸುಬ್ರಹ್ಮಣ್ಯ, ಚಿಟ್ಟಿಬಾಬು, ದೇವರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT