ದೇವನಹಳ್ಳಿ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಪಿಡಿಒ ಅವರನ್ನು ಮತ್ತೆ ಮರುನೇಮಕ ಮಾಡಿರುವ ಇಲಾಖೆ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಜಾಲಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಬಾಬು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ವರ್ಷದಿಂದ ಅಭಿವೃದ್ಧಿ ಆಧಿಕಾರಿಯಾಗಿದ್ದ ಉಷಾ ಅವರನ್ನು ಕಳೆದ ಆರು ತಿಂಗಳ ಹಿಂದೆ ಅಮಾನತುಗೊಳಿಸಲಾಗಿತ್ತು. ನಂತರ ಬಿದಲೂರಿಗೆ ಗ್ರಾಮ ಪಮಚಾಯಿತಿ ವರ್ಗಾವಣೆ ಮಾಡಲಾಗಿತ್ತು. ಮತ್ತೆ ನ.12ರಂದು ಜಾಲಿಗೆ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ಇದೇ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅಮಾನತು ಗೊಂಡಿದ್ದರೂ ಮತ್ತೆ ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಷಾ ಅವರು, ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿಲ್ಲ. ಹಲವು ಕಾಮಗಾರಿಗಳಲ್ಲಿ ಹಣದ ದುರಪಯೋಗವಾಗಿದೆ. ಇದುವರೆಗೂ ಗ್ರಾಮಸಭೆ ನಡೆಸಿಲ್ಲ. ಪಂಚಾಯಿತಿ ನಿರ್ವಹಣೆ ಬಗ್ಗೆ ಅರಿವಿಲ್ಲ ಎಂದು ಸಿಇಒ ಅಮಾನತುಗೊಳಿಸಿ ಇಲಾಖಾ ವಿಚಾರಣೆ ಒಳಪಡಿಸಿರುವಾಗ ಇದೇ ಪಂಚಾಯಿತಿಗೆ ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಬಚ್ಚಪ್ಪ ಮಾತನಾಡಿ, ಪಿಡಿಒ ಅವರಿಗೆ ಸಮಯಪ್ರಜ್ಞೆ ಇಲ್ಲ. ಅವರೊಬ್ಬ ಬೇಜವಬ್ದಾರಿ ಅಧಿಕಾರಿ. ಮಕ್ಕಳ ಮತ್ತು ಮಹಿಳೆಯರ ಗ್ರಾಮಸಭೆ ನಡೆಸಿಲ್ಲ. ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಧನ ನೀಡಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಶೋಭ, ಜೆ.ಎ.ಸುಬ್ರಮಣ್ಯ, ಎಲ್.ಅಶಾ, ನಾರಾಯಣಸ್ವಾಮಿ, ಎನ್.ಆನಂದ್, ಶ್ಯಾಮಲ, ಅನುರಾಧ, ಆಂಜಿನಪ್ಪ, ಬಿ.ಪಿ.ಭಾಗ್ಯಮ್ಮ ,ಸಿ.ಎಂ.ಚೈತ್ರ, ಮಾಂತುಕೃಷ್ಣ, ಕೆಂಪಣ್ಣ, ಶಿವಣ್ಣ ಹಾಗೂ ಗ್ರಾಮಸ್ಥರು ಇದ್ದರು.