ಆನೇಕಲ್: ಸಹದೇವಪುರ ತಿಮ್ಮರಾಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ವೈಭವದ ವೈರಮುಡಿ ಉತ್ಸವ ನಡೆಯಿತು.
ರಾತ್ರಿ 8ರ ವೇಳೆಗೆ ಕಿರೀಟಧಾರಿ ತಿಮ್ಮರಾಯಸ್ವಾಮಿ ಅಲಂಕೃತ ಉತ್ಸವ ಮೂರ್ತಿಗೆ ದೇವಾಲಯದ ಪ್ರಾಂಗಣದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವೈರಮುಡಿ ಉತ್ಸವ ಪ್ರಾರಂಭಿಸಲಾಯಿತು. ಮೇಲುಕೋಟೆ ವೈರಮುಡಿ ಉತ್ಸವದ ಮಾದರಿಯಲ್ಲಿ ಆಯೋಜಿಸಲಾಗಿದ್ದ ಉತ್ಸವಕ್ಕೆ ನೂರಾರು ಭಕ್ತರುಸಾಕ್ಷಿಯಾದರು.
ದೇವರನ್ನು ಹೊತ್ತ ಭಕ್ತರು ನಾದಸ್ವರ ವಾದ್ಯಕ್ಕೆ ತಕ್ಕಂತೆ ಉತ್ಸವ ಮೂರ್ತಿಯನ್ನು ಕುಣಿಸುತ್ತಾ ದೇವಾಲಯದ ಪ್ರದಕ್ಷಿಣೆ ಮಾಡಿದರು. ಕತ್ತಲಿನಲ್ಲಿ ಪಂಜಿನ ಬೆಳಕಿನಲ್ಲಿ ಸಾಗಿದ ವೈರಮುಡಿ ಉತ್ಸವ ಜನರನ್ನು ಭಕ್ತಿ ಪರವಶದಲ್ಲಿ ಮುಳುಗುವಂತೆ ಮಾಡಿತ್ತು. ಜನರು ಗೋವಿಂದ ಗೋವಿಂದ ಎಂಬ ಜಯಘೋಷಣೆ ಮೊಳಗಿಸುತ್ತಾ ಉತ್ಸವದ ಹಿಂದೆ ಸಾಗಿದರು.
ಉತ್ಸವಕ್ಕೆ ಮೆರಗು ನೀಡಿದಂತೆ ಬಾಣ ಬಿರುಸು, ಪಟಾಕಿಗಳ ಸದ್ದು ಮತ್ತು ಬೆಳಕು ಆಕರ್ಷಣೀಯವಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಕೆ.ರಾಮಚಂದ್ರ ಭಟ್ಟರು ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ವೈರಮುಡಿ ಉತ್ಸವದ ಅಂಗವಾಗಿ ಅನ್ನ ಸಂತಪರ್ಣೆ ಏರ್ಪಡಿಸಲಾಗಿತ್ತು.
ಪುರಸಭಾ ಸದಸ್ಯರಾದ ಎನ್.ಎಸ್.ಪದ್ಮನಾಭ್, ಮಲ್ಲಿಕಾರ್ಜುನ್, ಚಂದ್ರಿಕಾ ಹನುಮಂತರಾವ್ ಇದ್ದರು.