ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಸವಣ್ಣ, ಕೆಂಪಾಜಮ್ಮ, ಮಾರಮ್ಮ ದೇವಾಲಯಗಳ ಹುಂಡಿಯನ್ನು ಕಳವು ಮಾಡಲಾಗಿದೆ.
ಬಸವಣ್ಣ ದೇವಾಲಯಕ್ಕೆ ಅಳವಡಿಸಲಾಗಿದ್ದ ಬಾಗಿಲಿನ ಬೀಗವನ್ನು ಕಬ್ಬಿಣದ ಸಲಾಕೆಯಿಂದ ಮುರಿದಿರುವ ಕಳ್ಳರು, ಕಾಣಿಕೆ ಹಣ ಕಳವು ಮಾಡಿದ್ದಾರೆ. ಅದೇ ರೀತಿ ಕೆಂಪಾಜಮ್ಮ, ಮಾರಮ್ಮ ದೇವಾಲಯದಲ್ಲಿನ ಹುಂಡಿ ಕಾಣಿಕೆ ಹಣವನ್ನು ಕಳವು ಮಾಡಿ, ಖಾಲಿ ಹುಂಡಿಯನ್ನು ಬಸವಣ್ಣ ದೇವಾಲಯದ ಹಿಂಭಾಗ ಎಸೆಯಲಾಗಿದೆ.
ಮಾರಮ್ಮ ದೇವಾಲಯ ಮತ್ತು ಕೆಂಪಾಜಮ್ಮ ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೇಬಲ್ ಕತ್ತರಿಸಿ ಹುಂಡಿ ಕಳವು ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ ಕೆಂಪಾಜಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಈಗ ಇದೇ ಗ್ರಾಮದ ಮೂರು ದೇವಾಲಯಗಳಲ್ಲೂ ಒಂದೇ ರಾತ್ರಿ ಕಳ್ಳತನ ನಡೆದಿರುವ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದ ಹಲವಾರು ದೇವಾಲಯಗಳಲ್ಲಿ ಹುಂಡಿ ಕಳವು ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಇದುವರೆಗೂ ಕಳ್ಳರು ಪತ್ತೆಯಾಗಿಲ್ಲ.