ಹೊಸಕೋಟೆ: ‘ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂಬ ಸೂಚನೆ ಇತ್ತು. ಆದರೂ, ನಮ್ಮೂರ ಬೆಂಡಿಗಾನಹಳ್ಳಿ ಸಮೀಪದ ತಮರಸನಹಳ್ಳಿಯಲ್ಲಿ ಬಸ್ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಮೂಲಕ ಕಳೆದ ಸಾಲಿನಲ್ಲಿ ಜಯಂತಿ ಆಚರಿಸಲಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಖಾಜಿ ಮೊಹಲ್ಲಾದಲ್ಲಿ ಶುಕ್ರವಾರ ಏರ್ಪಡಿಸಿದ್ದ ಉರುಸ್ನಲ್ಲಿ ಪಾಲ್ಗೊಂಡು ಮಾತನಾಡಿದರು.
ಟಿಪ್ಪು ಜಯಂತಿ ಕುರಿತು ಶರತ್ ಅವರನ್ನು ಪ್ರಶ್ನಿಸಿದಾಗ ‘ಮುಂದೆ ಆಚರಣೆ ಮಾಡುವುದಾಗಿ ನಾನು ಎಲ್ಲೂ ಹೇಳಿಲ್ಲ. ಈ ವಿಚಾರದಲ್ಲಿ ಪಕ್ಷದ ನಾಯಕರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.
‘ಸಂವಿಧಾನ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸಿದ್ದಾರೆ. ಆದರೆ, ಜನರಿಂದ ಆಯ್ಕೆಯಾದವರು ಸೇವೆ ಮಾಡುವುದನ್ನು ಬಿಟ್ಟು ಮುಂಬೈಗೆ ಓಡಿ ಹೋಗಿದ್ದರು’ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಅವರಿಗೆ ಟಾಂಗ್ ನೀಡಿದರು.