ಆನೇಕಲ್: ತಾಲ್ಲೂಕಿನಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಹಾಗಾಗಿ ಕೆಲವು ಖಾಸಗಿ ಡೆವಲಪರ್ಗಳು ಜನರಿಗೆ ವಂಚಿಸಿ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆ ಸರ್ಕಾರ ತನಿಖೆ ಕೈಗೊಂಡು ಬಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮೂಲನಿವಾಸಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಮುನಿಮಾರಪ್ಪ ಒತ್ತಾಯಿಸಿದರು.
ತಾಲ್ಲೂಕಿನ ಚಂದಾಪುರದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಮೀನು ಕಬಳಿಸಿರುವವರ ಬಗ್ಗೆ ನ್ಯಾಯಾಲಯದ ಆದೇಶಗಳಿದ್ದರೂ ಪ್ರಭಾವ ಬಳಸಿ ಜಮೀನು ಸ್ವಾಧೀನಪಡಿಸಿ ಅಭಿವೃದ್ಧಿಪಡಿಸಿ, ನಿವೇಶನ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನಿವೇಶನ ಕೊಂಡವರಿಗೂ ತೊಂದರೆ ಮತ್ತು ಜಮೀನು ಕಳೆದುಕೊಂಡವರಿಗೂ ತೊಂದರೆಯಾಗಿದೆ. ಈ ನಡುವೆ ಮಧ್ಯವರ್ತಿಗಳಾದ ಡೆವಲಪರ್ಗಳು ಲಾಭ ಮಾಡಿಕೊಂಡಿದ್ದಾರೆ. ಗಟ್ಟಹಳ್ಳಿಯ ಸರ್ವೆ ನಂ.12/2ರಲ್ಲಿ 2 ಎಕರೆ ಜಮೀನನ್ನು ಖಾಸಗಿ ಡೆವಲಪರೊಬ್ಬರು ಕಬಳಿಸಿದ್ದಾರೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜಮೀನನ್ನು ಕಡಿಮೆ ಬೆಲೆಗೆ ಖರೀದಿಸಿ ವಂಚನೆ ಮಾಡಲಾಗಿದೆ. ಇಂತಹ ಹಲವು ಪ್ರಕರಣಗಳು ತಾಲ್ಲೂಕಿನಲ್ಲಿವೆ. ಹಾಗಾಗಿ ಭೂ ಕಬಳಿಕೆದಾರರಿಂದಾಗುವ ವಂಚನೆಗಳನ್ನು ಪೊಲೀಸ್ ಠಾಣೆಗಳಲ್ಲಿ ಆದ್ಯತೆಯ ಮೇರೆಗೆ ಕ್ರಮ ತೆಗೆದುಕೊಂಡು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಗಳು ಒಂದು ಜಾತಿಗೆ ಸೀಮಿತವಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಸಂಘಟನೆಗಳ ಜವಾಬ್ದಾರಿಯಾಗಬೇಕು. ಈ ನಿಟ್ಟಿನಲ್ಲಿ ಮೂಲನಿವಾಸಿ ಅಂಬೇಡ್ಕರ್ ಸಂಘವು ಶೋಷಿತರ ಮತ್ತು ಭೂ ವಂಚಿತರಾದವರ ದನಿಯಾಗಿ ಕೆಲಸ ಮಾಡುತ್ತದೆ ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಂ.ವೆಂಕಟೇಶ್, ಬಿಎಸ್ಪಿಯ ಶ್ರೀನಿವಾಸ್, ರಾಜ್ಯ ಮೂಲನಿವಾಸಿ ಅಂಬೇಡ್ಕರ್ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಸೀನ, ಯುವ ಘಟಕದ ಅಧ್ಯಕ್ಷ ಮುನಿರಾಜಜು, ರಾಜ್ಯ ಕಾರ್ಯಾಧ್ಯಕ್ಷ ಸೊಣ್ಣಪ್ಪ, ಆರ್.ನಾಗರಾಜು ಇದ್ದರು.