ಗುಬ್ಬಿ: ತಾಲ್ಲೂಕಿನಾದ್ಯಂತ ಅಡಿಕೆ ಚೇಣಿದಾರರು ಹಾಗೂ ರೈತರು ಅಡಿಕೆ ಸುಲಿದ ನಂತರ ಸಿಪ್ಪೆ ವ್ಯವಸ್ಥಿತವಾಗಿ ವಿಲೇವಾರಿ ಮಾಡದೆ ಹೆದ್ದಾರಿ ಹಾಗೂ ಗ್ರಾಮೀಣ ಭಾಗದಲ್ಲಿ ರಸ್ತೆ ಪಕ್ಕದಲ್ಲಿ ಸುರಿದು ಬೆಂಕಿ ಇಡುತ್ತಿರುವುದು ಕಂಡು ಬರುತ್ತಿದೆ.
ನೀರಾವರಿ ಅನುಕೂಲ ಹೆಚ್ಚಾದಂತೆ ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಯುವ ಭೂಪ್ರದೇಶ ವಿಸ್ತಾರಗೊಳ್ಳುತ್ತಿದೆ. ಇತ್ತೀಚಿನ ಅಂಕಿ–ಅಂಶ ಪ್ರಕಾರ ಸುಮಾರು 30 ಸಾವಿರ ಹೆಕ್ಟೇರ್ಗಿಂತಲೂ ಹೆಚ್ಚು ಭೂಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.
ಮಾವಿನ ಬೆಳೆಗೆ ಹೆಸರಾಗಿದ್ದ ಚೇಳೂರು ಮತ್ತು ಹಾಗಲವಾಡಿ ಹೋಬಳಿಗಳಲ್ಲಿಯೂ ಮಾವಿನ ಗಿಡ ಕಡಿದು ಅಡಿಕೆ ಸಸಿ ಬೆಳೆಸುತ್ತಿರುವುದು ಸಾಮಾನ್ಯವಾಗಿದೆ. ಅಡಿಕೆಗೆ ಉತ್ತಮ ಧಾರಣೆ ಸಿಗುತ್ತಿರುವುದರಿಂದ ರೈತರು ಅಡಿಕೆ ಬೆಳೆಯುವತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
ಅಡಿಕೆ ಸುಲಿಯಲು ಯಂತ್ರ ಬಳಸುತ್ತಿರುವ ರೈತರು, ಸಿಪ್ಪೆ ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಅರಿವು ಇಲ್ಲದೆ ಎಲ್ಲೆಂದರಲ್ಲಿ ಸುರಿದು ಬೆಂಕಿ ಹಚ್ಚುತ್ತಿದ್ದಾರೆ.
ಅಧಿಕಾರಿಗಳು ಸಿಪ್ಪೆ ವೈಜ್ಞಾನಿಕವಾಗಿ ಕೊಳೆಸುವ ಪದ್ಧತಿ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಜತೆಗೆ ತಪ್ಪು ಮಾಡಿರುವವರಿಗೆ ಕಾನೂನು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರೈತರು, ಚೇಣಿದಾರರು ರಾತ್ರಿ ವೇಳೆಯಲ್ಲಿಯೇ ಅಡಿಕೆ ಸಿಪ್ಪೆ ಸುರಿದು ರಾತ್ರಿ ವೇಳೆಯೇ ಬೆಂಕಿ ಇಡುತ್ತಿರುವುದು ದುರದೃಷ್ಟಕರ. ಅಡಿಕೆ ಸಿಪ್ಪೆ ಎಲ್ಲೆಂದರಲ್ಲಿ ಸುರಿದು ತೊಂದರೆ ಆಗದಂತೆ ಎಚ್ಚರ ವಹಿಸಬೇಕಾಗಿದೆ ಎನ್ನುತ್ತಾರೆ ಪ್ರಗತಿಪರ ರೈತ ಚಂದ್ರು.